ಲಕ್ನೋ: ತನ್ನ ಬೇಡಿಕೆಯನ್ನು ತಾಯಿ ಈಡೇರಿಸುತ್ತಿಲ್ಲ ಎಂದು ಮನನೊಂದು 14 ವರ್ಷದ ಬಾಲಕನೊಬ್ಬ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಕಳೆದ 3-4 ದಿನಗಳಿಂದ ಬಾಲಕ ಮನೆಗೆ ಬೆಕ್ಕಿನ ಮರಿ ತೆಗೆದುಕೊಂಡು ಬನ್ನಿ ಎಂದು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾರೆ. ಬಾಲಕನ ತಂದೆ ಚೀನಾದಲ್ಲಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ತಂದೆ ಬಂದ ಬಳಿಕ ಬೆಕ್ಕಿನ ಮರಿ ತರುವ ಎಂದು ಮಗನಿಗೆ ತಾಯಿ ಹೇಳಿದ್ದಾರೆ.
ಆದರೆ ತಂದೆ ಬರುವವರೆಗೆ ಕಾಯಲು ಆಗಲ್ಲ. ನನಗೆ ಈಗಲೇ ಬೆಕ್ಕಿನ ಮರಿ ಬೇಕು ಎಂದು ಆತ ಹಠ ಮಾಡಿದ್ದಾನೆ. ಆದರೆ ಮಗನ ಮಾತಿಗೆ ತಾಯಿ ಸೊಪ್ಪು ಹಾಕಲಿಲ್ಲ. ಇದರಿಂದ ಬೇಸರಗೊಂಡ ಬಾಲಕ ರೂಮಿಗೆ ತೆರಳಿದ್ದಾನೆ. ಅಲ್ಲದೆ ರೂಮಿನ ಬಾಗಿಲು ಕೂಡ ಹಾಕಿಕೊಂಡು ಒಳಗೆ ಸೇರಿದ್ದಾನೆ. ಈ ಬಗ್ಗೆ ತಾಯಿ ತಲೆಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ಬ್ಯುಸಿಯಾದರು.
ಮರುದಿನ ಬೆಳಗ್ಗೆ ಜಿಮ್ ಟ್ರೈನರ್ ಹಾಗೂ ಬಾಲಕನ ತಾಯಿ ರೂಮಿನ ಬಾಗಿಲು ಒಡೆದು ನೋಡಿದಾಗ ದಂಗಾಗಿದ್ದಾರೆ. ಬಾಲಕ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾಲಕ ದೆಹಲಿಯ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯ ಹಾಸ್ಟೆಲ್ ನಲ್ಲಿ ಇದ್ದ ಬಾಲಕ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಹೇರಿದ್ದ ಪರಿಣಾಮ ಮನೆಗೆ ಬಂದಿದ್ದನು. ಇದೂವರೆಗೂ ಬಾಲಕನ ಸಾವಿನ ಸಂಬಂಧ ಕುಟುಂಬಸ್ಥರು ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.