ಹಾಸನ: ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆದ ಹಾಸನದ ಯುವಕ 594 ನೇ ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಹರಳಕಟ್ಟೆ ಗ್ರಾಮದ ಯುವಕ ದರ್ಶನ್ 594 ನೇ ರ್ಯಾಂಕ್ ಪಡೆದವರು. ದರ್ಶನ್ ಒಂದರಿಂದ ನಾಲ್ಕನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿದ್ದಾರೆ. ನಂತರ 5ನೇ ತರಗತಿಯಿಂದ 8ನೇ ತರಗತಿವರೆಗೆ ರಾಷ್ಟ್ರೋತ್ಥಾನ ಶಾಲೆಯಲ್ಲಿ ಓದಿದ್ದು, 9 ರಿಂದ 10ನೇ ತರಗತಿವರೆಗೆ ತಿಪಟೂರಿನ ಎಸ್ವಿಪಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
2009ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ದರ್ಶನ್ ಇನ್ಫೋಸಿಸ್ನಲ್ಲಿ ಸುಮಾರು ಆರು ವರ್ಷ ಕೆಲಸ ಮಾಡಿದ್ದಾರೆ. ಎರಡೂವರೆ ವರ್ಷ ಅಮೆರಿಕಾದಲ್ಲೂ ಕೆಲಸ ಮಾಡಿದ ದರ್ಶನ್ ನಂತರ ಕೆಲಸ ಬಿಟ್ಟು ಯುಪಿಎಸ್ಸಿ ತಯಾರಿ ನಡೆಸಿದ್ದರು.
ಇದೀಗ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡುವಲ್ಲಿ ದರ್ಶನ್ ಸಫಲರಾಗಿದ್ದಾರೆ. ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದ ದರ್ಶನ್, ಈ ಬಾರಿ ಯುಪಿಎಸ್ಸಿ ಆಯ್ಕೆಯಾದವರಲ್ಲಿ ಕನ್ನಡದಲ್ಲೇ ಪರೀಕ್ಷೆ ಬರೆದು ಆಯ್ಕೆಯಾದ ಏಕೈಕ ಯುವಕರಾಗಿದ್ದಾರೆ.