ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟು, ಕೋವಿಡ್ ರಿಪೋರ್ಟ್ ಪಡೆಯಲು 3-4 ದಿನಗಳ ವರದಿಗೆ ಕಾಯಬೇಕಿಲ್ಲ. ಕೇವಲ 40 ನಿಮಿಷದ ಒಳಗಡೆ ಕೋವಿಡ್ ಪರೀಕ್ಷೆಯ ಫಲಿತಾಂಶ ಬರಲಿದೆ.
ಇಲ್ಲಿಯವರೆಗೆ ವ್ಯಕ್ತಿ ಮೃತಪಟ್ಟರೆ ಆತನ ಗಂಟಲ ದ್ರವದ ಮಾದರಿಯನ್ನು ಲ್ಯಾಬ್ಗೆ ಕಳುಹಿಸಿ ಆರ್ಟಿ ಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ ಲ್ಯಾಬ್ಗೆ ಕಳುಹಿಸುವ ಬದಲು ಆ್ಯಂಟಿಜೆನ್ ಪರೀಕ್ಷೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಹಲವು ಪ್ರಕರಣಗಳಲ್ಲಿ ಮೃತ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಫಲಿತಾಂಶಕ್ಕಾಗಿ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಕೊರೊನಾಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗಿದೆ.
ವ್ಯಕ್ತಿ ಮೃತಪಟ್ಟರೆ ಆತನ ದೇಹವನ್ನು ಆಸ್ಪತ್ರೆಗೆ ತರುವ ಅಗತ್ಯವಿಲ್ಲ. ಸಾವಿನ ವಿಚಾರವನ್ನು ಬಿಬಿಎಂಪಿಗೆ ತಿಳಿಸಿದರೆ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೋವಿಡ್ 19 ಪರೀಕ್ಷೆ ಮಾಡುತ್ತಾರೆ. ಇದರ ಜೊತೆಗೆ ವ್ಯಕ್ತಿ ಮೃತಪಟ್ಟರೆ ಇನ್ನು ಮುಂದೆ ಬಿಬಿಎಂಪಿ ಅಧಿಕಾರಿ ಹೋಗಿ ದೃಢಿಕರಿಸುವ ಅವಶ್ಯಕತೆಯಿಲ್ಲ. ಆಸ್ಪತ್ರೆಯ ವೈದ್ಯರೇ ದೃಢಿಕರಿಸಿದರೂ ಆಗುತ್ತದೆ. ಇದರಿಂದ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ.
ಆ್ಯಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ಇಲ್ಲದೇ ಇದ್ದರೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಸೋಂಕು ದೃಢಪಟ್ಟರೆ ಸರ್ಕಾರಿ ನಿಯಮಾವಳಿಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುತ್ತದೆ.