– ಅವ್ಯವಸ್ಥೆಯ ಆಗರವಾಗಿದೆ ವಿಕ್ಟೋರಿಯಾ ಆಸ್ಪತ್ರೆ
– ಮಾತ್ರೆಗಳನ್ನು ಕೊಡಿ ಎಂದು ನರ್ಸ್ಗೆ ಅವಾಜ್ ಆಕ್ತಿದ್ದಾರೆ ಸೋಂಕಿತರು
ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ರಾಜ್ಯದ ಆಸ್ಪತ್ರೆಗಳ ಸ್ಥಿತಿಗತಿಯೇ ಹೇಳುತ್ತವೆ. ವೈದ್ಯರು, ನರ್ಸ್, ಬೆಡ್ ಕೊರತೆ ಮಧ್ಯೆ ಈಗ ಮೆಡಿಸನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಸೋಂಕಿತರು ತೀವ್ರ ಆತಂಕಕ್ಕೀಡಾಗಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರೆಗಳ ಕೊರತೆ ಉಂಟಾಗಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಎರಡು ದಿನದಿಂದ ಹೌಸ್ ಕೀಪಿಂಗ್ನವರು ಕೆಲಸಕ್ಕೆ ಬಾರದ್ದಕ್ಕೆ ಆಸ್ಪತ್ರೆ ಗಬ್ಬು ನಾರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು, ನರ್ಸ್ಗಳ ಕೊರತೆ ಮಧ್ಯೆ ಹೇಗೋ ಮಾತ್ರೆಗಳನ್ನು ನುಂಗಿ ಗುಣಮುಖರಾಗುತ್ತಿದ್ದ ಕೊರೊನಾ ಸೋಂಕಿತರಿಗೆ ಇದೀಗ ಮಾತ್ರೆಗಳ ಸಮಸ್ಯೆಯೂ ಎದುರಾಗಿದ್ದು, ಗುಣಮುಖರಾಗುವುದು ಹೇಗೆ ಎಂಬ ಭಯ ಎದುರಾಗಿದೆ.
ಕೊರೊನಾಗೆ ವ್ಯಾಕ್ಸಿನ್ ಇಲ್ಲದಿದ್ದರೂ, ಗುಣ ಲಕ್ಷಣಗಳನ್ನು ಆಧರಿಸಿ ಮೆಡಿಸಿನ್ ನೀಡಲಾಗುತ್ತಿತ್ತು. ಆದರೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಸನ್ ಕೊರತೆ ಎದುರಾಗಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ಗಳು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಮೆಡಿಸಿನ್ ತುಂಬಾ ಕಡಿಮೆ ಇದೆ. ದಯವಿಟ್ಟು ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ. ಆದರೂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಈ ಮಧ್ಯೆಯೇ ಎರಡು ಮೂರು ದಿನದಿಂದ ಆಸ್ಪತ್ರೆ ಸ್ವಚ್ಛಗೊಳಿಸಲು ಹೌಸ್ ಕೀಪಿಂಗ್ ನವರನ್ನೂ ಕಳುಹಿಸಿಲ್ಲ. ಇದರಿಂದಾಗಿ ವಾರ್ಡ್ಗಳು ಗಬ್ಬು ವಾಸನೆ ಹೊಡೆಯುತ್ತಿವೆ. ಮಾತ್ರೆಗಳು ಇಲ್ಲದ್ದಕ್ಕೆ ರೋಗಿಗಳು ಸುತ್ತುವರೆದು ನಮಗೆ ಬೆದರಿಕೆ ಹಾಕುತ್ತಿದ್ದಾರೆ, ನಾವೇನು ಮಾಡುವುದು. ನಮ್ಮ ಬಳಿ ಉತ್ತರವಿಲ್ಲ ದಯವಿಟ್ಟು ಮೆಡಿಸಿನ್ ಕಳುಹಿಸಿ ಎಂದು ನರ್ಸ್ಗಳು ಗೋಳಿಡುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಇಷ್ಟೆಲ್ಲ ಅವ್ಯವಸ್ಥೆ ತಾಂಡವಾಡುತ್ತಿದ್ದರೂ ಸರ್ಕಾರ ಮಾತ್ರ ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳ್ಳುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆಯೂ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದ್ದು, ಈ ಕುರಿತು ಸಹ ಕ್ರಮ ಕೈಗೊಂಡಿಲ್ಲ.