– ನಿಗೂಢ ಹೆಜ್ಜೆ ಇಡುತ್ತಿದೆ ಕೊರೊನಾ
– ಹೆಚ್ಚಾಗುತ್ತಿದೆ ವಿಷಮ ಶೀತ ಜ್ವರ, ಸಾರಿ ಪ್ರಕರಣ
– ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು ಬೆಂಗಳೂರಿನಲ್ಲಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಈಗ ನಿಗೂಢ ಹೆಜ್ಜೆಯನ್ನು ಇಡುತ್ತಿದೆ. ಇಲ್ಲಿಯವರೆಗೆ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕದಿಂದ ಕೊರೊನಾ ಬರುತ್ತಿತ್ತು. ಆದರೆ ಈಗ ಯಾವುದೇ ಸಂಪರ್ಕ ಇಲ್ಲದೇ ಕೊರೋನಾ ಗುಪ್ತಗಾಮಿನಿಯಂತೆ ದೇಹ ಸೇರುತ್ತಿದೆ.
ಲಾಕ್ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ಅನ್ಲಾಕ್ ಆಗುತ್ತಿದ್ದಂತೆ ಜನರ ಓಡಾಟದ ಜಾಸ್ತಿಯಾಗಿದ್ದು, ಅಂತರಾಜ್ಯ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹೀಗಾಗಿ ಈಗ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಲಾಕ್ಡೌನ್ ಸಮಯದಲ್ಲಿ ಕೊರೊನಾ ಬಗ್ಗೆ ಜನರಲ್ಲಿ ಸ್ವಲ್ಪವಾದರೂ ಭಯವಿತ್ತು. ಆದರೆ ಈಗ ಭಯ ಇಲ್ಲದಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧನವಾಗಿ ಹೆಚ್ಚಾಗುತ್ತಿದೆ.
ಶೀತ, ಕೆಮ್ಮು, ಜ್ವರ ಬಂದಿದೆ ಎಂದು ಸುಮ್ಮನಾದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. 5 ದಿನಗಳಲ್ಲಿ ಬೆಂಗಳೂರಿನಲ್ಲಿ ವಿಷಮ ಶೀತ ಜ್ವರ(Influenza Like Illness -ಐಎಲ್ಐ) ಉಸಿರಾಟದ(ಸಾರಿ) ಪ್ರಕರಣ ಹೆಚ್ಚಾಗಿದೆ.
ಯಾವ ದಿನ ಎಷ್ಟು?
ಜೂನ್ 9 ರಂದು ಒಟ್ಟು 29 ಪ್ರಕರಣಗಳು ಬಂದಿದ್ದು ಇದರಲ್ಲಿ 2 ಐಎಲ್ಐ, ಜೂನ್ 10 ರಂದು ಬಂದ 42 ಪ್ರಕರಣಗಳಲ್ಲಿ 21 ಐಎಲ್ಐ ಆಗಿತ್ತು. ಜೂನ್ 11ರಂದು ಒಟ್ಟು 17 ಪ್ರಕರಣಗಳು ಬಂದಿದ್ದು 6 ಐಎಲ್ಐ ಆಗಿದ್ರೆ 1 ಸಾರಿ ಆಗಿತ್ತು. ಜೂನ್ 12 ರಂದು ಬಂದ 36 ರಲ್ಲಿ 11 ಮಂದಿಗೆ ಐಎಲ್ಐ, 5 ಮಂದಿಗೆ ಸಾರಿ ಬಂದಿತ್ತು. ಜೂನ್ 13 ರಂದು ಒಟ್ಟು 31 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 12 ಮಂದಿಗೆ ವಿಷಮಶೀತ ಜ್ವರ ಇದ್ದರೆ ಇಬ್ಬರಿಗೆ ಉಸಿರಾಟ ತೊಂದರೆಯಿದೆ.
6 ದಿನಕ್ಕೆ 19 ಬಲಿ:
ಬೆಂಗಳೂರಿನಲ್ಲಿ ಬರೋಬ್ಬರಿ 6 ದಿನಕ್ಕೆ 19 ಜನ ಮೃತಪಟ್ಟಿದ್ದಾರೆ. ಜೂ.8 ರಿಂದ 13ನೇ ತಾರೀಖಿನವರೆಗೆ ಬಲಿಯಾದ 19 ಮಂದಿ ಸಾರಿ, ಐಎಲ್ಐ ಕಾರಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೃದಯ ಸಂಬಂಧಿ ಖಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಾ ಇದ್ದವರಿಗೆ ಐಎಲ್ಐ, ಸಾರಿ ಹೆಚ್ಚು ಬರುತ್ತಿರುವುದು ದೊಡ್ಡ ತಲೆನೋವಾಗಿದೆ.
ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇವರಿಗೆ ಹೇಗೋ ಕೊರೊನಾ ವೈರಸ್ ತಗುಲಿ ಮತ್ತಷ್ಟು ಸಮಸ್ಯೆ ತಂದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಸದ್ಯ ಈಗ ಬೆಂಗಳೂರಿನಲ್ಲಿ 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಒಟ್ಟು 648 ಮಂದಿಗೆ ಸೋಂಕು ಬಂದಿದ್ದು, ಒಟ್ಟು 29 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಬೆಂಗಳೂರಿನಲ್ಲೇ ಬಲಿಯಾಗಿದ್ದಾರೆ. 648ರ ಪೈಕಿ 319 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಬಿಡುಗಡೆಯಾಗಿದ್ದಾರೆ.