ಮೈಸೂರು: ಮೈತ್ರಿ ಸರ್ಕಾರದ ಪತನದ ಕುರಿತು ಎಚ್. ವಿಶ್ವನಾಥ್ ಪುಸ್ತಕ ಬರೆಯುವ ವಿವಾದಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಈಗಾಗಲೇ ಹೇಳಿದ್ದೇನೆ ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ ಎಂದು ವ್ಯಂಗ್ಯವಾಡಿದ್ದಾರೆ.
ವಿಶ್ವನಾಥ್ಗೆ ಯಾವುದೇ ನೈತಿಕತೆಯಿಲ್ಲ. ಇದೊಂದು ಬ್ಲಾಕ್ ಮೇಲ್ ಮಾಡುವ ತಂತ್ರ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿತ್ತು. ಸಚಿವರನ್ನಾಗೂ ಕೂಡ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಜೆಡಿಎಸ್ಗೆ ಹೋಗಿದ್ದರು. ಜೆಡಿಎಸ್ ಪಕ್ಷ ಕೂಡ ಶಾಸಕರಾಗಿ ಮಾಡಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿತ್ತು. ಆದರೆ ಅವರಿಗೂ ಕೂಡ ಮೋಸ ಮಾಡಿ ಬಿಜೆಪಿಗೆ ಹೋದರು. ಈಗ ಬಿಜೆಪಿಯಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೂ ಯಾವುದೇ ಸಿದ್ಧಾಂತಗಳಿಲ್ಲ. ಯಡಿಯೂರಪ್ಪರವರಿಗೆ ಉತ್ತಮ ಆಡಳಿತ ನೀಡಲು ಸುವರ್ಣ ಅವಕಾಶವಿದೆ. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲು ಕೂಡ ಅವರಿಗೆ ಸ್ವತಂತ್ರ ನೀಡುತ್ತಿಲ್ಲ ಎಂದರು.