ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಖಾಲಿ ಕೂತಿದ್ದಾರೆ. ಜನ ತಮ್ಮನ್ನು ಮರೆಯಬಾರದು ಅನ್ನೋ ಸಲುವಾಗಿ ಪ್ರತಿ ದಿನ ಮಾಧ್ಯಮದಲ್ಲಿ ಬರಬೇಕು ಅಂತ ಏನೇನೊ ಹೇಳುತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಲೆಳೆದಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರ ಕೊಟ್ಟಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ, ಸರ್ಕಾರದ ಆದೇಶಗಳು ಬಾಯಿಂದ ಇರೋದಿಲ್ಲ. ಬ್ಲ್ಯಾಕ್ ಆ್ಯಂಡ್ ವೈಟ್ ನಲ್ಲಿರುತ್ತವೆ, ಓದಬಹುದಲ್ಲ. ಪ್ರೊಸಿಡಿಂಗ್ಸ್ ಕಾಪಿ ಓದಬಹುದಲ್ಲ. ಒಮದು ಬಾರಿ ಸಿದ್ದರಾಮಯ್ಯ ಅದನ್ನು ಓದಲಿ ಎಂದು ತಿರುಗೇಟು ನೀಡಿದರು.
ಎಸ್ಡಿಆರ್ಎಫ್, ಎನ್ಡಿಆರ್ಎಫ್ ಪರಿಹಾರದ ಬಗ್ಗೆ ಸಮಿತಿಗಳಿರುತ್ತವೆ. ಆ ಪ್ರಕಾರ ಪರಿಹಾರ ಮಂಜೂರಾಗುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ಇಂತಹ ಅನೇಕ ಸಂದರ್ಭಗಳು ಬಂದಿವೆ. ಎಲ್ಲ ಸಂದರ್ಭ ನೋಡಿದರೆ ಅತಿ ಹೆಚ್ಚು ಪರಿಹಾರ ಧನ ಕೊಟ್ಟಿದ್ದು ಮೋದಿ ಸರ್ಕಾರ ಎಂದರು.
ಈ ಹಿಂದಿನ ಸರ್ಕಾರ ಎಷ್ಟು ಕೊಟ್ಟಿದೆ ಎಂದು ಜನರ ಮುಂದಿಡಲಿ. ಭಾವನಾತ್ಮಕ ಸಮಸ್ಯೆ ಕೆರಳಿಸಲು ಮನಬಂದಂಗೆ ಹೇಳಬಾರದು. ತುಮಕೂರಲ್ಲಿ ಯಡಿಯೂರಪ್ಪ ಮೋದಿ ಮುಂದೆ ಪ್ರವಾಹ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಆ ವಿಚಾರವನ್ನು ಟ್ವಿಸ್ಟ್ ಮಾಡಲಾಗಿದೆ ಎಂದು ಸಿಎಂ ಮನವಿಯನ್ನ ಸಮರ್ಥಿಸಿಕೊಂಡರು.