ರಾಮನಗರ: ಪೌರತ್ವ ತಿದ್ದುಪಡಿ ವಿರೋಧಿಸಿ ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಮುಸ್ಲಿಂ ಹಾಗೂ ಹಿಂದುಗಳು ಜಾತ್ಯಾತೀತವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ 400 ಮೀಟರ್ ಉದ್ದದ ಕನ್ನಡದ ಬಾವುಟ ರಂಗು ಪಡೆದುಕೊಂಡು ಪ್ರತಿಭಟನೆ ರ್ಯಾಲಿಯುದ್ದಕ್ಕೂ ಸಾಗಿತು.
ನಗರದ ಬೆಂಗಳೂರು- ಮೈಸೂರು ರಸ್ತೆಯ ಶೇರು ಸರ್ಕಲ್ ನಿಂದ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಭಾಗಿಯಾಗಿದ್ದರು. ಇನ್ನೂ ಶೇರು ಸರ್ಕಲ್ ನಿಂದ ಹೊರಟ ಪ್ರತಿಭಟನಾ ರ್ಯಾಲಿ ಹೆದ್ದಾರಿಯಲ್ಲಿ ಸಾಗಿ ಸಾತನೂರು ಸರ್ಕಲ್ ನಿಂದ ಹಳೇ ಕೋರ್ಟ್ ತನಕ ಸಾಗಿತು. ಪ್ರತಿಭಟನಾಕಾರರು ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಶೇರು ಸರ್ಕಲ್ ನಿಂದಲೇ ಕನ್ನಡದ ಬಾವುಟವನ್ನು ಪ್ರತಿಭಟನಾಕಾರರು ಹಿಡಿದುಕೊಂಡು ಸಾಗಿದ್ರು. ಬರೋಬ್ಬರಿ 400 ಮೀಟರ್ ಗೂ ಉದ್ದವಾದ ಬಾವುಟವು ಪ್ರತಿಭಟನೆಯಲ್ಲಿ ಆಕರ್ಷಣೀಯವಾಗಿತ್ತು. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗುಲಾಬಿ ನೀಡುವ ಮೂಲಕ ಹಿಂದೂ- ಮುಸ್ಲಿಂ ಭಾಯ್ ಭಾಯ್ ಎಂದು ಘೋಷಣೆ ಕೂಗುತ್ತಿದ್ದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಭಾಗವಹಿಸಿದ್ದರು. ಅಲ್ಲದೇ ರ್ಯಾಲಿಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರ ಜೊತೆ ನಡೆದು ಸಾಗಿದ್ದಲ್ಲದೇ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರನ್ನು ಹುರಿದುಂಬಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಜಮೀರ್ ಅಹಮದ್, ಕೇಂದ್ರ ಸರ್ಕಾರ ಎನ್ ಆರ್ ಸಿ, ಸಿಎಎ ತರುವ ಮೂಲಕ ದೇಶದಲ್ಲಿ ಮುಸ್ಲಿಮರ ವಿರೋಧಿ ನೀತಿಯನ್ನು ತಾಳುತ್ತಿದೆ. ದೇಶದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಬಾಳ್ವೆ ನಡೆಸುತ್ತಿದ್ದು ತಮ್ಮ ಬೇಳೆ ಬೇಯಿಸಿಕೊಳ್ಳಲು ಪೌರತ್ವ ಕಾಯ್ದೆ ತಿದ್ದುಪಡಿ ನಡೆಸುತ್ತಿದ್ದಾರೆ. ಬಿಜೆಪಿ ಆಡಳಿತ ವೈಫಲ್ಯವನ್ನ ಮುಚ್ಚಿಟ್ಟುಕೊಳ್ಳಲು ಈ ರೀತಿಯಾಗಿ ಜನರ ದಾರಿಯನ್ನ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.