ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಏರ್ಪಡಿಸಿ ಸ್ವತಃ ತಾವೇ ಊಟ ಬಡಿಸುವ ಮೂಲಕ ಅಯ್ಯಪ್ಪ ಸ್ವಾಮಿಯ ಭಕ್ತಿ ಮೆರೆದಿದ್ದಾರೆ.
ಪ್ರತಿ ವರ್ಷ ಶಿವರಾಜ್ಕುಮಾರ್ ಅವರು ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ಶಿವಣ್ಣ ಶಬರಿಮಲೆಗೆ ಹೋಗುತ್ತಿಲ್ಲ. ಶಬರಿಮಲೆಗೆ ಹೋಗದಿದ್ದರೂ ಶಿವಣ್ಣ ಪ್ರತಿ ವರ್ಷ ಅಪ್ಪಯ್ಯ ಭಕ್ತರ ಸೇವೆಯನ್ನು ಮಾಡುತ್ತಿದ್ದಾರೆ.
ಶಿವಣ್ಣ ಪ್ರತಿ ವರ್ಷ ಅಯ್ಯಪ್ಪ ಮಾಲೆ ಧರಿಸಿದ ಭಕ್ತರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದಾರೆ. ಹಾಗೆಯೇ ಬುಧವಾರ ಕೂಡ ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ವೇಳೆ ಅವರು ಸ್ವತಃ ತಾವೇ ಭಕ್ತರಿಗೆ ಊಟವನ್ನು ಬಡಿಸಿದ್ದಾರೆ. ಜೊತೆಗೆ ಭಕ್ತರಿಗೆ ದೇವರ ಅನುಗ್ರಹ ಸಿಗಲಿ ಎಂದು ಹಾರೈಸಿದ್ದಾರೆ.
ಅಭಿಮಾನಿಗಳು ಶಿವಣ್ಣ ಊಟ ಬಡಿಸುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಶಿವಣ್ಣ ತಮ್ಮ ಪತ್ನಿ ಗೀತಾ ಅವರ ಜೊತೆ ತಿರುಮಲ ತಿರುಪತಿ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದರು.