ನಿದ್ದೆ ಮಾಡದ ಮಗನನ್ನು ಕೊಂದು, ಗೋಣಿ ಚೀಲದಲ್ಲಿ ತುಂಬಿದ ಮಲತಂದೆ

Public TV
1 Min Read
father son 1

ಮುಂಬೈ: ರಾತ್ರಿ ಮಲಗುವ ಸಮಯವಾದರೂ ಮಗ ಮಲಗಲಿಲ್ಲ ಎಂದು ಸಿಟ್ಟಿಗೆದ್ದ ಮಲತಂದೆ ಆತನನ್ನು ಕೊಂದು, ಗೋಣಿ ಚೀಲದಲ್ಲಿ ತುಂಬಿ ಹೂತಿಟ್ಟ ಭಯಾನಕ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುಂಬೈನ ಪನ್ವೇಲ್ ಪ್ರದೇಶದ ನಿವಾಸಿ ರಾಕೇಶ್ ಅಂಬಾಜಿ ತಾಂಬ್ದೆ(32) ಕೃತ್ಯವೆಸೆಗಿದ ಆರೋಪಿ, ಸೂರಜ್(8) ಕೊಲೆಯಾದ ಮುಗ್ಧ ಬಾಲಕ. ಸೂರಜ್‍ಗೆ ರಾಕೇಶ್ ಮಲತಂದೆಯಾಗಿದ್ದು, ಭಾನುವಾರ ರಾತ್ರಿ ರಾಕೇಶ್ ಸೂರಜ್‍ನನ್ನು ಕೊಲೆ ಮಾಡಿದ್ದಾನೆ. ಆದರೆ ಮಂಗಳವಾರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Police Jeep

ಆರೋಪಿ ಆಟೋ ಚಾಲಕನಾಗಿದ್ದು, ಭಾನುವಾರ ರಾತ್ರಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದಿದ್ದನು. ಪತ್ನಿ, ಮಗನೊಂದಿಗೆ ಊಟ ಮಾಡಿ ಮಲಗಿದ್ದನು. ಆದರೆ ಈ ವೇಳೆ ಸೂರಜ್ ಮಾತ್ರ ಮಲಗದೆ ಗಲಾಟೆ ಮಾಡುತ್ತಿದ್ದನು. ಇದರಿಂದ ಸಿಟ್ಟಿಗೆದ್ದ ರಾಕೇಶ್ ಮೊದಲು ಸೂರಜ್‍ಗೆ ಬೈದಿದ್ದಾನೆ. ಆಗಲೂ ತನ್ನ ಮಾತು ಕೇಳದೆ ಸೂರತ್ ಮಲಗದಿದ್ದಾಗ ಕೋಪಕೊಂಡು ಎರಡೇಟು ಹೊಡೆದಿದ್ದಾನೆ. ಬಳಿಕ ಬಾಲಕನ್ನು ಕೊಲೆ ಮಾಡಿ, ಗೋಣಿ ಚೀಲದಲ್ಲಿ ಮೃತದೇಹ ಕಟ್ಟಿ, ಸ್ನೇಹಿತ ರಮೇಶ್ ಸಹಾಯದಿಂದ ಅದನ್ನು ಮನೆಯಿಂದ ದೂರ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಹೂತಿಟ್ಟು ಬಂದಿದ್ದಾನೆ.

arrest

ಬಾಲಕ ನಾಪತ್ತೆಯಾಗಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ತನಿಖೆ ನಡೆದಾಗ ಪ್ರಕರಣ ಬಯಲಾಗಿದೆ. ಮಲತಂದೆ ರಾಕೇಶ್ ಸೂರಜ್‍ನನ್ನು ಕೊಲೆ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ. ಸದ್ಯ ರಾಕೇಶ್ ಹಾಗೂ ರಮೇಶ್‍ನನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ಡಿ. 23ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *