ಚಿತ್ರದುರ್ಗ: ಮೂರು ಲಾರಿಗಳ ನಡುವೇ ಸರಣಿ ಅಪಘಾತ ಸಂಭವಿಸಿ ಓರ್ವ ಚಾಲಕ ದುರ್ಮರಣಕ್ಕೀಡಾಗಿ, ಏಳು ಜನ ರೈತರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ.
ಗದಗ್ ಜಿಲ್ಲೆ ಹಳ್ಳಿಗುಡಿಯಿಂದ ಆರು ಜನ ರೈತರು ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಲ್ಲಿ ವೇಗವಾಗಿ ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದು ಬಳಿಕ ರೈತರಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಕ್ಯಾಂಟರ್ ಚಾಲಕ ಹಾಗೂ ಕ್ಲೀನರ್ ಕ್ಯಾಂಟರ್ ನಲ್ಲೇ ಸಿಲುಕಿದ್ರು.
ಅತಿ ವೇಗವಾಗಿ ಬಂದು ಡಿಕ್ಕಿಗೆ ಕಾರಣನಾದ ಹರ್ಯಾಣ ಮೂಲದ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಮೃತನ ಹೆಸರು ಈವರೆಗೆ ಪತ್ತೆಯಾಗಿಲ್ಲ. ಈರುಳ್ಳಿ ರೇಟ್ ಚನ್ನಾಗಿದೆ ಅಂತ ಈರುಳ್ಳಿಯನ್ನು ಲಾರಿಗೆ ತುಂಬಿಕೊಂಡು, ಬೆಂಗಳೂರು ಮಾರುಕಟ್ಟೆಗೆ ಪಯಣ ಬೆಳೆಸಿದ್ದ ಚಾಲಕ ಸೇರಿದಂತೆ ಏಳು ಜನ ರೈತರು ಅಪಘಾತದಿಂದಾಗಿ ಆಸ್ಪತ್ರೆ ಸೇರುವಂತಾಗಿದೆ. ಗಾಯಗೊಂಡವರ ತಲೆ ಹಾಗೂ ಕೈಕಾಲುಗಳಿಗೆ ಬಲವಾದ ಪೆಟ್ಟಾಗಳಾಗಿದ್ದು, ಲಾರಿಯಲ್ಲಿ ಸಿಲುಕಿದ್ದ ಅವರನ್ನು ಸಹ ಪೊಲೀಸರು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ.
ಅದೃಷ್ಟವಶಾತ್ ರೈತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ವಲ್ಪ ಈರುಳ್ಳಿ ಮಾತ್ರ ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿದೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.