ಬೆಂಗಳೂರು: ವಿಧಾನ ಪರಿಷತ್ ಸದಸ್ಯರ ಅಸಮಾಧಾನಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಡೋಂಟ್ ಕೇರ್ ಅಂದಿದ್ದು, ಪಕ್ಷದ ಅಸಮಾಧಾನ ಸರಿ ಮಾಡೋದು ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ.
ಹೌದು. ಹೆಚ್ಡಿಕೆ ಅವರು ತಮ್ಮ ಪುತ್ರ, ಪತ್ನಿ ಜೊತೆ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮೇಲೆ ಅಸಮಾಧಾನಗೊಂಡಿರುವ ಜೆಡಿಎಸ್ ಪರಿಷತ್ ಸದಸ್ಯರು ಸಭೆ ಮೇಲೆ ಸಭೆ ನಡೆಸಿ ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ.
ಅಧಿಕಾರ ಇದ್ದಾಗ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯರ ಅಸಮಾಧಾನ ಶಮನ ಮಾಡಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮುಂದಾಗಿದ್ದಾರೆ. ಆದರೆ ಮಾಜಿ ಸಿಎಂ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಇದೇ ತಿಂಗಳ 6ರಂದು ದೇವೇಗೌಡರು ಕುಮಾರಸ್ವಾಮಿ ಮತ್ತು ರೇವಣ್ಣ ಜೊತೆ ಸಭೆ ನಿಗದಿ ಮಾಡಿದ್ದರು. ಆದರೆ ಇದೇ ಸಮಯಕ್ಕೆ ಹೆಚ್ಡಿಕೆ ಲಂಡನ್ ಗೆ ಹೊರಟು ನಿಂತಿದ್ದು ಪರಿಷತ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಮಗನ ಮುಂದಿನ ಸಿನಿಮಾ ಪ್ರಾಜೆಕ್ಟ್ ವಿಚಾರದ ಚರ್ಚೆ ಮಾಡಲು ಮಗ ಹಾಗೂ ಪತ್ನಿ ಸಮೇತ ಹೆಚ್ಡಿಕೆ ಲಂಡನ್ ಪ್ರವಾಸ ಕೈಗೊಂಡಿದ್ದು, ನವೆಂಬರ್ 8ರಂದು ವಾಪಸ್ಸಾಗಲಿದ್ದಾರೆ. ಆದರೆ ಇತ್ತ ನ.6ರಂದು ಕುಮಾರಸ್ವಾಮಿ ಇಲ್ಲದೆ ಸಭೆ ನಡೆಯಲ್ಲ. ಆದರೂ ಪರಿಷತ್ ಸದಸ್ಯರ ಅಸಮಾಧಾನಕ್ಕೆ ಕುಮಾರಣ್ಣ ಡೋಂಟ್ ಕೇರ್ ಎಂದಿದ್ದಾರೆ ಎನ್ನಲಾಗಿದೆ.