ಚೆನ್ನೈ: ಕಾಲಿವುಡ್ ನಟ ಸೂರ್ಯ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಟ ಸೂರ್ಯ ಅವರು ತಮ್ಮ ಅಭಿಮಾನಿಗಳಲ್ಲಿ, “ತಮಿಳುನಾಡಿನ ಯಾವುದೇ ಭಾಗದಲ್ಲಿ ನನ್ನ ಕಟೌಟ್ ಅಥವಾ ಬ್ಯಾನರ್ ಹಾಕಬೇಡಿ. ದಯವಿಟ್ಟು ಆ ಹಣವನ್ನು ಶಾಲೆಗಳಿಗೆ ದಾನ ಮಾಡಿ” ಎಂದು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಮಾತು ಕೇಳಿದ ಅಭಿಮಾನಿಗಳು ಅವರ ‘ಕಾಪ್ಪನ್’ ಚಿತ್ರದ ಬಿಡುಗಡೆಯ ದಿನ ಕಟೌಟ್ ಹಾಗೂ ಬ್ಯಾನರ್ ಹಾಕುವ ಬದಲು 200 ಜನರಿಗೆ ಹೆಲ್ಮೆಟ್ ನೀಡುವುದಾಗಿ ನಿರ್ಧರಿಸಿದ್ದಾರೆ.
ಆಗಿದ್ದೇನು?
ಕಳೆದ ಶುಕ್ರವಾರ ಟೆಕ್ಕಿ ಶುಭಾಶ್ರೀ(23) ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಎಐಎಡಿಎಂಕೆಯ ಬ್ಯಾನರ್ ಆಕೆಯ ತಲೆಯ ಮೇಲೆ ಬಿದ್ದಿತ್ತು. ಪರಿಣಾಮ ಶುಭಾಶ್ರೀ ಗಾಯಗೊಂಡು ಕೆಳಗೆ ಬಿದ್ದಿದ್ದಳು. ಇದೇ ವೇಳೆ ಹಿಂಬದಿಯಿಂದ ಲಾರಿಯೊಂದು ಯುವತಿಯ ಮೇಲೆ ಹರಿದು ಹೋಗಿತ್ತು. ಈ ಅಪಘಾತದಲ್ಲಿ ಶುಭಾಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಶುಭಾಶ್ರೀ ಮೃತಪಟ್ಟಿದ್ದಳು.
ಬ್ಯಾನರ್ ಬಿದ್ದು ಶುಭಾಶ್ರೀ ಮೃತಪಟ್ಟ ಪರಿಣಾಮ ಸಾರ್ವಜನಿಕರು ರಾಜಕೀಯ ವ್ಯಕ್ತಿಗಳ ವಿರುದ್ಧ ಹಾಗೂ ಸಿನಿಮಾ ಕಲಾವಿದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದರು. ಈ ಕಾರಣಕ್ಕಾಗಿ ಸೂರ್ಯ ಅವರು ತಮಿಳುನಾಡಿನ ಯಾವುದೇ ಭಾಗದಲ್ಲಿ ತಮ್ಮ ಬ್ಯಾನರ್ ಹಾಗೂ ಕಟೌಟ್ ಹಾಕದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
2017ರಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನಾದ್ಯಂತ ಎಲ್ಲಾ ರೀತಿಯ ಬ್ಯಾನರ್ ಗಳು, ಹೋರ್ಡಿಂಗ್ಗಳು ಹಾಗೂ ಜಾಹೀರಾತುಗಳನ್ನು ನಿಷೇಧಿಸುವ ಆದೇಶವನ್ನು ನೀಡಿತ್ತು. ಹೈಕೋರ್ಟ್ ಹಲವು ಬಾರಿ ಎಚ್ಚರಿಕೆ ಹಾಗೂ ಆದೇಶ ನೀಡಿದರು ಸಹ ರಾಜಕೀಯ ಪಕ್ಷಗಳು ಹಾಗೂ ಅವರ ಬೆಂಬಲಿಗರು ಇಂತಹ ಅಕ್ರಮ ಬ್ಯಾನರ್ ಹಾಕುವ ಮೂಲಕ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ.