ಮೈಸೂರು: ನನ್ನನ್ನು ಕ್ಲರ್ಕ್ ರೀತಿ ನಡೆಸಿಕೊಂಡರು ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಆರೋಪಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಯವರು ನನ್ನನ್ನು ಶತ್ರು ಎಂದು ತಿಳಿದುಕೊಂಡಿದ್ದರಿಂದ ತಪ್ಪಾಯ್ತು. ಮಿತ್ರ ಅಥವಾ ವಿಶ್ವಾಸಿಗರು ಅಥವಾ ಮೈತ್ರಿ ಪಕ್ಷದ ನಾಯಕರು ಅಂತಾ ತಿಳಿದುಕೊಂಡಿದ್ದರೆ ಸರ್ಕಾರಕ್ಕೆ ಏನು ಆಗುತ್ತಿರಲಿಲ್ಲ. ಆಡಳಿತ ನಡೆಸಲು ಬರದಿದ್ದವರೂ ತಮ್ಮನ್ನ ಎಫ್ಡಿಎ ಎಂದು ತಿಳಿದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿಯವರಿಗೆ ತೀಕ್ಷ್ಣವಾಗಿ ಮಾತಿನ ಚಾಟಿ ಬೀಸಿದರು.
ಹೆಚ್ಡಿಕೆ ಹೇಳಿದ್ದೇನು?
ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ನವರ ಒತ್ತಡದಲ್ಲಿ ಕೆಲಸ ಮಾಡಬೇಕಿತ್ತು. ಕಾಂಗ್ರೆಸ್ ನನ್ನ ಮೇಲೆ ಸವಾರಿ ಮಾಡಿತು. ವರ್ಗಾವಣೆಯಲ್ಲೂ ಅವರು ಹೇಳಿದ್ದನ್ನೇ ಮಾಡಬೇಕಿತ್ತು. ಡಿಸಿ ವರ್ಗಾವಣೆಯಲ್ಲೂ ನನಗೆ ಸ್ವಾತಂತ್ರ್ಯ ಇರಲಿಲ್ಲ. ವರ್ಗಾವಣೆ ನನ್ನ ವ್ಯಾಪ್ತಿಗೆ ಬಂದರೂ ನಾನು ಕಾಂಗ್ರೆಸ್ನವರು ಏನ್ ಹೇಳ್ತಾರೋ ಅದನ್ನೇ ಮಾಡ್ಬೇಕಿತ್ತು. ಇವತ್ತು ಒಳ್ಳೆಯ ವ್ಯಕ್ತಿಗಳಿಗೆ ರಾಜಕೀಯ ಅಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆಯೇ ನನಗೆ ಗ್ಯಾರಂಟಿ ಇಲ್ಲ. ಮೈತ್ರಿ ಸರ್ಕಾರದಲ್ಲಿ ಸಿಎಂ ಅಲ್ಲ, `ಎಫ್ಡಿಎ ಕ್ಲರ್ಕ್’ (ಫಸ್ಟ್ ಡಿವಿಷನ್ ಕ್ಲರ್ಕ್) ಆಗಿದ್ದೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ವಿರುದ್ಧ ನೇರ ಕದನಕ್ಕಿಳಿದಿದ್ದಾರೆ.