ಬೆಂಗಳೂರು: ಹಿರಿಯ ರಾಜಕಾರಣಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಬೆಂಗಳೂರಿನ ವಿದ್ಯಾಭೂಷಣ್ ಅವರ ಕುಟುಂಬ ಕಂಬನಿ ಮಿಡಿದಿದೆ.
1999ರ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧೆ ನಡೆಸಿದ್ದರು. ಚುನಾವಣೆ ಪ್ರಚಾರ ವೇಳೆ ಸುಷ್ಮಾ ಸ್ವರಾಜ್ ಗೆ ಆರೋಗ್ಯ ಸಮಸ್ಯೆ ಉಂಟಾದಾಗ, ಸುಷ್ಮಾ ಅವರಿಗೆ ಬಳ್ಳಾರಿಯ ವೈದ್ಯ ಡಾ. ಶ್ರೀನಿವಾಸ್ ಮೂರ್ತಿ ಚಿಕಿತ್ಸೆ ನೀಡಿದ್ದರು.
ಆಗಿನಿಂದ ಡಾ. ಶ್ರೀನಿವಾಸ್ ಮೂರ್ತಿ ಅವರ ಕುಟುಂಬದ ಜೊತೆ ಒಡನಾಟ ಬೆಳೆದಿತ್ತು. ಡಾ.ಶ್ರೀನಿವಾಸ್ ಮೂರ್ತಿ ಅವರ ಅಳಿಯ ವಿದ್ಯಾಭೂಷಣ್ ಅವರಿಗೂ ಸುಷ್ಮಾ ಆಪ್ತರಾಗಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲ ಅವರ ಮನೆಯಲ್ಲಿಯೇ ಬೆಳಗ್ಗಿನ ಉಪಹಾರ ಸೇವಿಸುತ್ತಿದ್ದರು. ತಮಗೆ ಇಷ್ಟವಾದ ಪಡ್ಡು ಮತ್ತು ಕಿಚಿಡಿಯನ್ನು ತಿನ್ನುತ್ತ ಕುಟುಂಬದ ಜೊತೆ ಆತ್ಮೀಯವಾಗಿ ಮಾತನಾಡುತ್ತಿದ್ದರು.
ಇನ್ನು ಕಳೆದ ಮೂರು ತಿಂಗಳ ಹಿಂದೆ ವಿದ್ಯಾಭೂಷಣ್ ಅವರ ಪತ್ನಿ ರಮ ಅವರು ದೆಹಲಿಗೆ ತೆರಳಿ ಸುಷ್ಮಾ ಅವರ ಆರೋಗ್ಯ ವಿಚಾರಿಸಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಆಹ್ವಾನ ನೀಡಿದ್ದರು. ಆದರೆ, ಅನಾರೋಗ್ಯ ಹಿನ್ನಲೆ ಈಗ ಬರಲು ಸಾಧ್ಯವಾಗುತ್ತಿಲ್ಲ. ಮುಂದಿನ ಹಬ್ಬಕ್ಕೆ ಬರುತ್ತೇನೆ ಎಂದು ಸುಷ್ಮಾ ತಿಳಿಸಿದ್ದರು.
1999 ರ ಚುನಾವಣೆಯಲ್ಲಿ, ಗೆದ್ದರೂ, ಸೋತರೂ ಬಳ್ಳಾರಿಗೆ ಪ್ರತಿವರ್ಷ ಬರುತ್ತೇನೆ ಎಂದು ಸುಷ್ಮಾ ಮಾತು ಕೊಟ್ಟಿದ್ದರು. ಹೀಗಾಗಿ ಪ್ರತಿವರ್ಷ ಬಳ್ಳಾರಿಗೆ ಆಗಮಿಸಿ ಹಿರಿಯ ವೈದ್ಯ ಬಿ.ಕೆ.ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸುತ್ತಿದ್ದರು.
ಕಳೆದ 8-10 ವರ್ಷಗಳಿಂದ ಬಳ್ಳಾರಿಗೆ ನಿರಂತರವಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಹೀಗೆ 20 ವರ್ಷಗಳಿಂದ ಅವರ ಒಡನಾಟವಿತ್ತು. ಇದೀಗ ಅವರ ಅಗಲಿಕೆಗೆ ಡಾ. ಶ್ರೀನಿವಾಸ್ ಮೂರ್ತಿ, ಹಾಗೂ ವಿದ್ಯಾಭೂಷಣ್ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
1999ರ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧೆ ನಡೆಸಿದ್ದರು. ಆಗ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಾದಾಗ ಸುಷ್ಮಾ ಅವರನ್ನು ಬಿಜೆಪಿ ಸಂಸದೀಯ ಮಂಡಳಿ, ದಿಲ್ಲಿಯಿಂದ ದಿಢೀರ್ ಬಳ್ಳಾರಿಗೆ ಕಳುಹಿಸಿತು. ಬಳ್ಳಾರಿ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಸುಷ್ಮಾ, ಬಿಜೆಪಿಯ ಹವಾ ಸೃಷ್ಟಿಸಿದ್ದರು. ಆಗ ಘಟಾನುಘಟಿ ಕ್ಷೇತ್ರಗಳಲ್ಲಿ ಬಳ್ಳಾರಿಯೂ ಒಂದಾಗಿ ರಾಜಕೀಯ ರಂಗು ಪಡೆದಿತ್ತು. ಉತ್ತರ ಭಾರತದ ಪ್ರಬಲ ಮಹಿಳೆಯರಿಬ್ಬರು ಸ್ಪರ್ಧಿಸಿ ಹೋರಾಟ ನಡೆಸಿದ್ದ ಬಳ್ಳಾರಿ, ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯಿತು. ಇದು ಕರ್ನಾಟಕದಲ್ಲಿ ಬಿಜೆಪಿ ಬಲ ವೃದ್ಧಿಗೂ ಅಡಿಪಾಯವಾಗಿತ್ತು.