– ಕನ್ನಡದಲ್ಲೇ ಮಾತು, ವರಮಹಾಲಕ್ಷ್ಮೀ ಹಬ್ಬ ಆಚರಣೆ
– ಬಳ್ಳಾರಿಯಲ್ಲಿ ನೀರವ ಮೌನ
ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಕರ್ನಾಟಕದೊಂದಿದೆ ಅವಿನಾಭಾವ ಸಂಬಂಧ ಹೊಂದಿದ್ದರು. 1999ರಿಂದ ಪ್ರತಿ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರುವ ಸಂಪ್ರದಾಯ ಬೆಳೆಸಿಕೊಂಡಿದ್ದರು. ಆದರೆ ಇದೀಗ ಹಬ್ಬಕ್ಕೆ 2 ದಿನ ಇರುವಾಗಲೇ ಸುಷ್ಮಾ ಅವರು ಕೊನೆಯುಸಿರೆಳೆದಿದ್ದು, ಬಳ್ಳಾರಿಯಲ್ಲಿ ನೀರವ ಮೌನ ಆವರಿಸಿದೆ.
1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಸೋನಿಯಾ ಗಾಂಧಿ ಅವರ ವಿರುದ್ಧ ಬಳ್ಳಾರಿ ಕ್ಷೇತ್ರದಲ್ಲಿ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ದರು. ಈ ವೇಳೆ ಕನ್ನಡವನ್ನು ಸಂಸ್ಕೃತ ಇಲ್ಲವೇ ಹಿಂದಿಯಲ್ಲಿ ಬರೆದುಕೊಂಡು ಕನ್ನಡದಲ್ಲಿಯೇ ಭಾಷಣ ಮಾಡುತ್ತಿದ್ದರು. ಈ ಭಾಷಣದ ಕ್ಯಾಸೆಟ್ಗಳನ್ನು ಲಕ್ಷಾಂತರ ಜನರು ಖರೀದಿಸಿ ಕೇಳಿದ್ದರು.
ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧೆ ಮಾಡಿದಾಗ ರಾಜ್ಯದಲ್ಲಿ ಬಿಜೆಪಿಯು ಅಷ್ಟಾಗಿ ಗಟ್ಟಿಗೊಂಡಿರಲಿಲ್ಲ. ಪ್ರಚಾರದ ಮೂಲಕ ಬಳ್ಳಾರಿಯ ಜನರ ಮನ ಗೆದ್ದರು. ಆದರೆ ಚುನಾವಣೆಯಲ್ಲಿ ಸೋಲು ಕಂಡರು. ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಜನರ ಮನ ಹಾಗೂ ಮನೆ ತಲುಪಿತ್ತು.
ಸುಷ್ಮಾ ಸ್ವರಾಜ್ ಅವರು ಚುನಾವಣಾ ಸಂದರ್ಭದಲ್ಲಿ ಬಳ್ಳಾರಿಯ ಹೃದ್ರೋಗ ತಜ್ಞರಾದ ಡಾ.ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಸಿದ್ದರು. ಆಗ ನಾನು ಸೋತರೂ ಸರಿ, ಗೆದ್ದರೂ ಸರಿ ತವರು ಮನೆಯಂತಿರುವ ಬಳ್ಳಾರಿಗೆ ಸಾಧ್ಯವಾದಷ್ಟು ವರ್ಷ ಬರುತ್ತೇನೆ. ಪ್ರತಿ ವರಮಹಾಲಕ್ಷ್ಮಿ ಪೂಜೆಯನ್ನು ಬಳ್ಳಾರಿಯಲ್ಲೇ ಮಾಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಪ್ರತಿ ವರ್ಷವೂ ಬಳ್ಳಾರಿಗೆ ಬಂದು ವರಮಹಾಲಕ್ಷ್ಮಿ ಪೂಜೆ ಮಾಡುತ್ತಿದ್ದರು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಶಾಸಕ ಶ್ರೀರಾಮುಲು ಅವರ ಮನೆಗೂ ಭೇಟಿ ನೀಡಿ, ಪೂಜೆಯಲ್ಲಿ ಭಾಗವಹಿಸುತ್ತಿದ್ದರು.
https://www.youtube.com/watch?v=cBEdU1ss17Q