ಬಾಗಲಕೋಟೆ: ನಗರದ ಎಕ್ಷಟೆನ್ಶನ್ ಏರಿಯಾದಲ್ಲಿ ಬುಧವಾರ ರಾತ್ರಿ ವೇಳೆ ಹೃದಯಸ್ಪರ್ಶಿ ಸನ್ನಿವೇಶ ನಡೆದಿದೆ.
ಬುಧವಾರ ರಾತ್ರಿ ಒಂದು ಆಕಳು ಕರು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಹಸು ಕರುವನ್ನು ಎರಡು ಗಂಟೆಗಳ ಕಾಲ ಅದನ್ನು ಎದ್ದೇಳಿಸುವ ಪ್ರಯತ್ನ ಮಾಡಿದೆ. ಸತ್ತುಬಿದ್ದ ಕರುವನ್ನು ಎದ್ದೇಳು ಎನ್ನುವಂತೆ ಹಸು ನಾಲಿಗೆಯಿಂದ ಸವರಿ ತನ್ನ ಮಮತೆಯ ಕಡಲನ್ನೇ ಹರಿಸಿದೆ.
ತನ್ನ ಕರುವನ್ನು ಯಾರಾದರೂ ಹೊತ್ತೊಯ್ಯಹುದೆಂಬ ಕಾರಣಕ್ಕೆ ಹಸು ಕರುವನ್ನು ಬಿಟ್ಟು ಕದಲದೆ ಕಾಯುತ್ತಾ ನಿಂತಿತ್ತು. ಕರುವಿನ ಹತ್ತಿರ ಯಾರನ್ನು ಸುಳಿಯಲು ಬಿಡದೆ ಕಾವಲಾಗಿ ಕಾಯ್ದಿದೆ. ಹತ್ತಿರ ಬಂದರೆ ಹಾಯೋಕೆ ಬರುತ್ತಿದ್ದ ಹಸು ತನ್ನ ಕರುವಿನ ಮೇಲೆ ತನ್ನು ಕರುಳ ಬಳ್ಳಿ ಪ್ರೀತಿಯನ್ನು ವ್ಯಕ್ತಪಡಿಸಿದೆ.
ಬ್ರೆಡ್ ಆಸೆ ತೋರಿಸಿದರೂ ಕರುವನ್ನು ಬಿಟ್ಟು ಮೂರು ಅಡಿ ತೆರಳದ ಹಸುವಿನ ಮಮತೆ ನೋಡುಗರ ಮನ ಮಿಡಿಯುವಂತೆ ಮಾಡಿತ್ತು. ಎರಡು ಗಂಟೆಗಳ ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗೋ ರಕ್ಷಕ ಸಮಿತಿಯವರು ಹಸುವಿಗೆ ಬ್ರೆಡ್ ಕಡೆ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ಕರುವನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ದಿದ್ದಾರೆ.
ಕಂದನಿಗಾಗಿ ಹಸು ಅಂಬಾ ಎಂದು ಗೋಗರೆದ ದೃಶ್ಯ ತಾಯಿ ಕರುಳು ಆಕಾಶಕ್ಕೂ ಮಿಗಿಲಾದದ್ದು ಎಂಬುದನ್ನು ಸಾಬೀತು ಮಾಡಿದೆ. ಪ್ರಾಣಿ ಪಕ್ಷಿಗಳಿಗೂ ತಮ್ಮ ಮಕ್ಕಳ ಮೇಲೆ ಎಷ್ಟೊಂದು ಪ್ರೀತಿ ಇರುತ್ತೆಂದು ಜನರ ಹೃದಯ ಕಲುಕಿದ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು.