ತುಮಕೂರು: ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಗ್ರಾಮದ ನಾಲ್ವರು ಗಾಯಗೊಂಡಿದ್ದಾರೆ.
ಬಾಯ್ಲರ್ ನಿಂದ ವಿಷಾನಿಲ ಸೋರಿಕೆಯಾಗಿ ಸುತ್ತಮುತ್ತಲ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಹಾಗೆಯೇ ಘಟನೆಯಿಂದ ಸುಮಾರು ಮೂರು ಕಿಮೀ ದೂರದಷ್ಟು ಸ್ಫೋಟದ ತೀವ್ರತೆಗೆ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಆಗಮಿಸಿದ್ದಾರೆ.
ಅವಘಡ ಸಂಭವಿಸುವ ವೇಳೆ ಫ್ಯಾಕ್ಟರಿಯಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಬೆಳಗ್ಗಿನ ಸಮಯವಾಗಿದ್ದರಿಂದ ತಿಂಡಿಗೆ ಸಿಬ್ಬಂದಿ ತೆರಳಿದ್ದರು. ಹೀಗಾಗಿ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅಲ್ಲದೆ ಈ ಹಿಂದೆ ಕೂಡ ಈ ರೀತಿ ಬಾಯ್ಲರ್ ಸ್ಫೋಟಗೊಂಡಿತ್ತು. ಆಗ ಕೂಡ ವಿಷಾನಿಲ ಸೋರಿಕೆಯಾಗಿ ಗ್ರಾಮಸ್ಥರು ಉಸಿರಾಡಲು ಕಷ್ಟಪಟ್ಟಿದ್ದರು. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ಈ ಭಾಗದ ಸುತ್ತಮುತ್ತ ವಾಸಿಸುತ್ತಿರುವ ಜನರು ತೊಂದರೆ ಅನುಭವಿಸುವಂತಗಿದೆ. ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸದ್ಯ ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೇಗೆ ಸ್ಫೋಟ ಸಂಭವಿಸಿತು ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.