ಕಲಬುರಗಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಚಿಕ್ಕಪ್ಪನೊಬ್ಬ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ.
ಶಂಕರ್ ಮ್ಯಾಕೇರಿ(40) ಹಾಗೂ ಅಡೆಮ್ಮ(30) ಕೊಲೆಯಾದವರು. ಇವರಿಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಲೇ ರೆಡ್ಹ್ಯಾಂಡ್ ಆಗಿ ಚಿಕ್ಕಪ್ಪನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡು ಇಬ್ಬರನ್ನು ಸ್ಥಳದಲ್ಲಿಯೇ ಕೊಚ್ಚಿ ಕೊಲೆ ಮಾಡಲಾಗಿದೆ.
ಶಂಕರ್ ಮ್ಯಾಕೇರಿ ಹಾಗೂ ಅಡೆಮ್ಮ ಅನೇಕ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದೆ. ಇಬ್ಬರೂ ವಿವಾಹತರಾಗಿದ್ದು, ಮಕ್ಕಳಿದ್ದಾರೆ. ಅಡೆಮ್ಮಳನ್ನು ಪತಿ ಬಿಟ್ಟು ಹೋಗಿದ್ದರಿಂದ ಆಕೆ ಸಹೋದರ ಸಂಬಂಧಿಕರ ಜೊತೆ ವಾಸವಾಗಿದ್ದಳು. ಅದೇ ಗ್ರಾಮದ ಶಂಕರ್ ಮ್ಯಾಕೇರಿ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದು, ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು.
ಆದರೆ ಮಂಗಳವಾರ ಇಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಲೇ ರೆಡ್ಹ್ಯಾಂಡ್ ಆಗಿ ಅಡೆಮ್ಮಳ ಚಿಕ್ಕಪ್ಪನ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಚಿಕ್ಕಪ್ಪ ಇಬ್ಬರನ್ನು ಅಟ್ಟಾಡಿಸಿಕೊಂಡು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.