ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅಗಲಿ ಇಂದಿಗೆ ಎರಡು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ, ನಟಿ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಅಂಬರೀಶ್ ಅವರ ಎರಡನೇ ತಿಂಗಳ ಪುಣ್ಯ ಸ್ಮರಣೆ ಆಗಿದ್ದು, ಸುಮಲತಾ ಹಾಗೂ ಅಭಿಷೇಕ್ ಜೊತೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಅಂಬಿ ಆಪ್ತ ಶ್ರೀನಿವಾಸ್, ದೊಡ್ಡಣ್ಣ ಸೇರಿದಂತೆ ಅಭಿಮಾನಿಗಳು ಪೂಜೆಯಲ್ಲಿ ಭಾಗಿ ಆಗಿದ್ದಾರೆ.
ಪೂಜೆ ಮಾಡುವ ವೇಳೆ ಸಮಾಧಿ ಮುಂದೆ ಅಂಬಿ ಇಷ್ಟದ ಇಡ್ಲಿ, ದೋಸೆ, ಚಿಕನ್, ಮಟನ್, ಅಕ್ಕಿ ರೊಟ್ಟಿ, ಕೇಸರಿ ಬಾತ್ ಇಟ್ಟು ಪೂಜೆ ಮಾಡಿದ್ದಾರೆ. ಅಲ್ಲದೇ ಪೂಜೆ ಮುಗಿಸಿದ ಬಳಿಕ ಸುಮಲತಾ ಹಾಗೂ ಅಭಿಷೇಕ್ ಅಭಿಮಾನಿಗಳಿಗೆ ಅನ್ನದಾನ ಮಾಡಿದ್ದಾರೆ.
ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv