ಬೆಳಗಾವಿ: ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಆತನ ಮಕ್ಕಳು ಸೇರಿ ವ್ಯಕ್ತಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಮಾರ ಬಸಪ್ಪ ಕವಲಗುಡ್ಡ ಹಲ್ಲೆಗೆ ಒಳಗಾದ ವ್ಯಕ್ತಿ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಯಪ್ಪ ಗೌಡಪ್ಪನವರ್ ಹಾಗೂ ಆತನ ಮಕ್ಕಳಾದ ಮಹದೇವ್ ಹಾಗೂ ಭೀಮಪ್ಪ ಮನಬಂದಂತೆ ಥಳಿಸಿದ್ದಾರೆ. ಬಸಪ್ಪ, ನಿಮ್ಮ ಮನೆಗೆ ನಿಮ್ಮ ಸೊಸೆಯನ್ನ ಕರೆದುಕೊಂಡು ಹೋಗಿ ಎಂದು ಹೇಳಲು ಬಂದಿದ್ದಾರೆ. ಈ ವೇಳೆ ಸೊಸೆಯ ಚಿಕ್ಕಪ್ಪ ಬಸಪ್ಪನನ್ನು ಅಧ್ಯಕ್ಷ ರಾಯಪ್ಪ, ಮಹದೇವ ಹಾಗೂ ಭೀಮಪ್ಪ ಸೇರಿ ಬೈಕ್ ಮೇಲಿಂದ ಬೀಳಿಸಿ ಒದ್ದು, ಶರ್ಟ್ ಹರಿದು ಮನಬಂದಂತೆ ಥಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಯಪ್ಪನ ಪುತ್ರನಾದ ಮಹಾದೇವನ ಪತ್ನಿ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ 6 ತಿಂಗಳು ಹಿಂದೆ ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ನಂತರ ರಾಜಿ ಪಂಚಾಯತಿ ಬಳಿಕ ರಾಯಪ್ಪ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು. ಆದರೆ 6 ತಿಂಗಳಾದರೂ ಮನೆಗೆ ಕರೆದುಕೊಂಡು ಹೋಗದ ಕಾರಣ ಮಗಳನ್ನ ಕರೆದುಕೊಂಡು ಹೋಗುವಂತೆ ಹೇಳಲು ಬಂದಿದ್ದ ಚಿಕ್ಕಪ್ಪನನ್ನು ಮನುಷ್ಯತ್ವವನ್ನ ಮರೆತು ಥಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಗಿರುವ ಕಾರಣ ಪೊಲೀಸರು ಆರೋಪಿಗಳನ್ನ ಬಂಧಿಸುತ್ತಿಲ್ಲ ಎಂದು ಥಳಿತಕ್ಕೊಳಗಾದ ಕುಮಾರ ಕವಲಗುಡ್ಡ ಕುಟುಂಬಸ್ಥರು ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv