ಮುಂಬೈ: ಹಾಸ್ಯ ನಟ, ನಿರೂಪಕ ಕಪಿಲ್ ಶರ್ಮಾ ಎಷ್ಟು ಬೇಗ ಎತ್ತರಕ್ಕೆ ಬೆಳೆದರೋ, ಅಷ್ಟೇ ಬೇಗ ತೆರೆಯ ಹಿಂದೆ ಮರೆಯಾದ ವ್ಯಕ್ತಿ. ತಮ್ಮ ಮಾತಿನ ಶೈಲಿ, ಹಾಸ್ಯ ಚಟಾಕಿಗಳಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ಕಪಿಲ್ ಶರ್ಮಾ ಖಾಸಗಿ ವಾಹಿನಿಯ ಕಾರ್ಯಕ್ರಮದಿಂದ ಹೊರ ಬಂದು ಅಭಿಮಾನಿ ಮತ್ತು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದಾರೆ. ಸದ್ಯ ಕಪಿಲ್ ಶರ್ಮಾ ಜೀವನಾಧರಿತ ಸಿನಿಮಾ ತೆರೆಯ ಮೇಲೆ ತರಲು ನಿರ್ದೇಶಕರೊಬ್ಬರು ಸಿದ್ಧತೆ ನಡೆಸಿಕೊಂಡಿದ್ದಾರೆ.
ನಟ ಸಂಜಯ್ ದತ್ ರವರ ಜೀವನ ಚರಿತ್ರೆಯ ಸಂಜು ಸಿನಿಮಾ ಯಶಸ್ವಿಯಾಗಿದೆ. ಈ ಚಿತ್ರದ ಎಫೆಕ್ಟ್ ನಂತರ ಇದೀಗ ಕಾಮಿಡಿ ಕಿಂಗ್ ಕಪಿಲ್ ಶರ್ಮಾರವರ ಜೀವನ ಚರಿತ್ರೆಯ ಮೇಲೆ ಚಿತ್ರ ನಿರ್ಮಾಣ ಮಾಡಲು ‘ತೇರಿ ಭಾಬಿ ಹೈ ಪಗ್ಲೆ’ ಚಿತ್ರದ ನಿರ್ದೇಶಕ ವಿನೋದ್ ತಿವಾರಿ ನಿರ್ಧರಿಸಿದ್ದಾರೆ.
ಕಪಿಲ್ ಶರ್ಮಾರವರನ್ನ ಕಾಮಿಡಿಯ ಕಿಂಗ್ ಎಂದು ಕರೆಯುತ್ತಾರೆ. ಅವರು ತಮ್ಮ ಸತತ ಪರಿಶ್ರಮದಿಂದ ಈ ಬಿರುದು ಪಡೆದುಕೊಂಡಿದ್ದಾರೆ. ಪಂಜಾಬ್ ನ ಅಮೃತ್ಸರ್ ನಲ್ಲಿ ಜನಿಸಿದ ಕಪಿಲ್ ಶರ್ಮಾರವರನ್ನ ಕಾಮಿಡಿ ಪ್ರಪಂಚದ ಕಿರೀಟವಿಲ್ಲದ ಅರಸ ಎಂತಲೂ ಕರೆಯುತ್ತಾರೆ. ಕಪಿಲ್ ರವರ ಜೀವನದ ಮೇಲೆ ಆದಂತಹ ಸಕ್ಸಸ್ನ ಸೈಡ್ ಎಫೆಕ್ಟ್ ಗಳು ನಮ್ಮ ಮುಂದಿವೆ.
ಸ್ಟಾರ್ ಗಿರಿ ಪಡೆದುಕೊಂಡ ಕಪಿಲ್ ತನ್ನ ವರ್ತನೆಗಳಿಂದ ಸಾಕಷ್ಟು ನಷ್ಟವನ್ನು ಉಂಟು ಮಾಡಿಕೊಂಡಿದ್ದರು. ಹೀಗಾಗಿ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದ್ದಾರೆ. ಅವರ ಸಾಧನೆಯಲ್ಲಿ ಹಲವಾರು ಬಾರಿ ಅವನತಿ ಹಾಗೂ ಖಿನ್ನತೆಯನ್ನ ಕಂಡಿದ್ದಾರೆ. ಒಂದು ಚಿತ್ರಕ್ಕೆ ಬೇಕಾಗುವಂತಹ ಎಲ್ಲಾ ಮಸಾಲೆ ಕಪಿಲ್ ಅವರ ಜೀವನದಲ್ಲಿ ನಮಗೆ ಸಿಗುತ್ತದೆ. ಈ ರೀತಿಯ ಜೀವನದ ಸಾಹಸವನ್ನ ಕಂಡು ಕೆಲವು ಚಲನಚಿತ್ರ ನಿರ್ಮಾಪಕರು ಅವರ ಮೇಲೆ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.
ಕಪಿಲ್ ಇಂಡಸ್ಟ್ರಿಯಲ್ಲಿ ನಿಧಾನವಾಗಿ ಹೊರಹೊಮ್ಮಿ ಹಾಸ್ಯ ಜಗತ್ತಿನ ಕಿಂಗ್ ಆಗಿ ಬದಲಾದ ವ್ಯಕ್ತಿ. ಹೀರೋ ಯಿಂದ ಝೀರೋ ಆಗಿದ್ದ ಸನ್ನಿವೇಶಗಳು ಸಹ ನಮ್ಮ ಕಣ್ಮುಂದೆ ಇದೆ. ಅಷ್ಟಾದರು ಸಹಾ ತಮ್ಮ ಹಾರ್ಡ್ ವರ್ಕ್ನಿಂದ ಏಳಿಗೆಯನ್ನು ಕಂಡಿರುವುದು ಸಹ ನಮಗೆ ತಿಳಿದಿರುವ ವಿಚಾರ. ಆದ್ದರಿಂದ ನಾನು ಅವರ ನಿಜ ಜೀವನದ ಮೇಲೆ ಚಲನಚಿತ್ರವನ್ನು ಮಾಡಲು ಬಯಸಿದ್ದೇನೆ ಎಂದು ತಿವಾರಿ ತಿಳಿಸಿದ್ದಾರೆ.
ವಿನೋದ್ ತಿವಾರಿ ಶೀಘ್ರದಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕಪಿಲ್ ಅವರೊಂದಿಗೆ ಮಾತನಾಡಲಿದ್ದಾರಂತೆ. ತಮ್ಮ ಜೀವನ ಚರಿತ್ರೆಯ ಚಿತ್ರದಲ್ಲಿ ಕಪಿಲ್ ಅವರೇ ನಟಿಸಬೇಕು ಎಂದು ವಿನೋದ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಒಂದು ವೇಳೆ ಕಪಿಲ್ ನಟಿಸಲು ನಿರಾಕರಿಸಿದರೆ ಅವರ ಪಾತ್ರದಲ್ಲಿ ಕೃಷ್ಣ ಅಭಿಷೇಕ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಪಿಲ್ ತಮ್ಮ ಜೀವನಚರಿತ್ರೆಯ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡ್ತಾರಾ? ಅಥವಾ ಅವರ ಪಾತ್ರದಲ್ಲಿ ಕೃಷ್ಣ ಅಭಿಷೇಕ್ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಅದೇನೇ ಆಗಲಿ ಕಪಿಲ್ ಜೀವನ ಚರಿತ್ರೆಯ ಸಿನಿಮಾ ನೋಡಲು ಅವರ ಫ್ಯಾನ್ಸ್ ಕಾತುರರಾಗಿದ್ದಾರೆ.