ಚಿಕ್ಕೋಡಿ: ಆಟವಾಡಲು ಹೋಗಿ ಬಾವಿಗೆ ಬಿದ್ದು ಎರಡು ಕಂದಮ್ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.
6 ವರ್ಷದ ಆದರ್ಶ ಸುಭಾಷ್ ತಳವಾರ ಹಾಗೂ 5 ಅಭಿಶೇಕ್ ಬಸವರಾಜ್ ಮಡಿವಾಳ ಮೃತ ದುರ್ದೈವಿ ಬಾಲಕರು. ಗ್ರಾಮದ ರಬಕವಿ ತೋಟದ ವಸತಿಯಲ್ಲಿ ಪೋಷಕರೊಂದಿಗೆ ಗದ್ದೆಗೆ ತೆರಳಿದ ಸಂದರ್ಭದಲ್ಲಿ ಆಟ ಆಡುತ್ತ ಎರಡೂ ಮಕ್ಕಳು ಬಾವಿಗೆ ಬಿದ್ದು ಈಜು ಬಾರದೇ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬಾವಿಯೊಳಗಿನ ಅಭಿಷೇಕನ ಶವವನ್ನು ಹೊರ ತೆಗೆದಿದ್ದು, ಆದರ್ಶನ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.