ಎಲೆಕ್ಷನ್ ಹೊತ್ತಲ್ಲೇ ಯಡಿಯೂರಪ್ಪ, ಕುಮಾರಸ್ವಾಮಿಗೆ ಬಿಗ್ ಶಾಕ್

Public TV
1 Min Read
BSY KUMARASWAMY

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ತಮ್ಮ ಪಕ್ಷದ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಎದುರಾಗಿದೆ.

ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಶನ್ ಪ್ರಕರಣಕ್ಕೆ ಮರುಜೀವ ಬಂದಿದ್ದು, ಈ ಮೂಲಕ ಮೂರು ವರ್ಷದ ಹಿಂದಿನ ಕೇಸ್‍ನಲ್ಲಿ ನಾಯಕರು ಮತ್ತೆ ಕಾನೂನು ಹೋರಾಟ ಮುಂದುವರೆಸುವಂತಾಗಿದೆ.

ಏನಿದು ಪ್ರಕರಣ?: ಗಂಗೇನಹಳ್ಳಿ ಡಿನೋಟಿಫಿಕೇಶನ್ ಸಂಬಂಧ 2015ರಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಬಿ.ಎಸ್‍ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಹೆಚ್‍ಡಿ ಕುಮಾರಸ್ವಾಮಿಯವರು ತಮ್ಮ ಅತ್ತೆ ವಿಮಲಮ್ಮನಿಗೆ 51 ಗುಂಟೆ ಜಮೀನನ್ನು ನೀಡಿದ್ದರು. ವಿಮಲಮ್ಮ ತಮ್ಮ ಮಗ ಶೇಖರಯ್ಯನ ಹೆಸರಿಗೆ ಈ ಆಸ್ತಿಯನ್ನ ರಿಜಿಸ್ಟರ್ ಮಾಡಿಕೊಟ್ಟಿದ್ದರು. ಇದೀಗ ಇದೇ ಜಮೀನಿಗೆ ಸಂಬಂಧಿಸಿದಂತೆ ಬಿಎಸ್ ವೈ ಕೂಡಾ ಆರೋಪ ಎದುರಿಸುವಂತಾಗಿತ್ತು.

ಈ ನಡುವೆ ಜಾಮೀನಿನ ಡಿನೋಟಿಫಿಕೇಷನ್ ಕೇಸ್ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ರದ್ದು ಮಾಡುವಂತೆ ಬಿಎಸ್‍ವೈ ಹೈಕೋರ್ಟ್ ಮೊರೆ ಹೋಗಿದ್ದರು. ಇಲ್ಲಿವರೆಗೆ ಹೈಕೋರ್ಟ್‍ನಲ್ಲಿ ಪ್ರಕರಣ ಉಳಿದಿತ್ತು. ಈ ಪ್ರಕರಣದ ತನಿಖೆಯನ್ನ ಮುಂದುವರಿಸಬೇಕು. ಆರೋಪ ಪಟ್ಟಿ ಯಾಕೆ ಸಲ್ಲಿಸಿಲ್ಲ. ಪ್ರಕರಣ ನಡೆದು ಮೂರು ವರ್ಷವಾದ್ರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಏ.3ರಂದು ಮರು ಆಕ್ಷೇಪಣೆ ಸಲ್ಲಿಸಿದ್ದರು.

ಬಿಎಸ್‍ವೈ ಸಿಎಂ ಆಗಿದ್ದಾಗ ಜಾಗ ಡಿನೋಟಿಫಿಕೇಶನ್ ಮಾಡಲು ಹೇಳಿದ್ರು. ರಾಜಶೇಖರಯ್ಯ ಎಂಬವರು ಈ ಜಾಗವನ್ನ ಡಿನೋಟಿಫೈ ಮಾಡಿಸಿಕೊಂಡಿದ್ರು. ಯಾವುದೇ ದಾಖಲೆಯನ್ನ ಸಲ್ಲಿಸದೆ ಬಿಳಿ ಹಾಳೆಯಲ್ಲಿ ಬರೆದು ಕೊಡಲಾಗಿದೆ ಅನ್ನೋ ಅಂಶಗಳನ್ನು ಜಯಕುಮಾರ್ ತಮ್ಮ ಆಕ್ಷೇಪಣೆಯಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲೀಗ ಕೇಸಿಗೆ ಮತ್ತೆ ಜೀವ ಬಂದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *