ಬೆಂಗಳೂರು: ಬೆಳ್ಳಂಬೆಳಗ್ಗೆ ಪತಿ ಕದ್ದು ಮುಚ್ಚಿ ಎರಡನೇ ಮದುವೆಯಾಗುತ್ತಿದ್ದ ವಿಷಯ ತಿಳಿದ ಮೊದಲ ಪತ್ನಿ ಮದುವೆಯಾಗುತ್ತಿದ್ದ ದೇವಾಲಯಕ್ಕೆ ತೆರಳಿ ನ್ಯಾಯಕ್ಕಾಗಿ ರಂಪಾಟ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗದ್ದುಗೆ ಮಠದಲ್ಲಿ ನಡೆದಿದೆ. ಗುಡೇಮಾರನಹಳ್ಳಿಯ ನಿವಾಸಿ ರೇಣುಕಾಪ್ರಸಾದ್ ಎರಡನೇ ಮದುವೆಗೆ ಮುಂದಾಗಿದ್ದನು. ಈತ 9 ವರ್ಷದ ಹಿಂದೆ ಕುಸುಮಾ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು.
ಯುವತಿ ಕೂಡ ಗುಡೇಮಾರನಹಳ್ಳಿಯ ನಿವಾಸಿಯಾಗಿದ್ದು, ಮನೆಯವರ ವಿರೋಧದ ನಡುವೆಯೇ ಇಬ್ಬರು ಮದುವೆಯಾಗಿದ್ದರು. ನಂತರದಲ್ಲಿ ರೇಣುಕಾ ಪ್ರಸಾದ್ನ ಮನೆಯವರು ಇವರಿಬ್ಬರ ಮದುವೆಗೆ ಅಡ್ಡಿಪಡಿಸಿ ಗಲಾಟೆ ಕೂಡ ನಡೆದಿತ್ತು.
ಇಂದು ಕದ್ದು ಮುಚ್ಚಿ ಮಗನಿಗೆ ಪೋಷಕರು ಎರಡನೇ ಮದುವೆ ಮಾಡಲು ಮುಂದಾಗಿದ್ದರು. ಈ ವೇಳೆ ನೊಂದ ಮಹಿಳೆ ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರೊಂದಿಗೆ ಸಹಾಯ ಪಡೆದಿದ್ದಾರೆ. ಅಲ್ಲದೇ ಮದುವೆ ನಡೆಯುತ್ತಿದ್ದ ದೇವಾಲಯಕ್ಕೆ ತೆರಳಿ ನ್ಯಾಯಕ್ಕಾಗಿ ರಂಪಾಟ ನಡೆಸಿ ಮದುವೆಯನ್ನು ನಿಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳು ವರದಿಗೆ ತೆರಳುತ್ತಿದ್ದಂತೆಯೇ ವರ ರೇಣುಕಾ ಪ್ರಸಾದ್ ಹಾಗೂ ಎರಡನೇ ಮದುವೆಗೆ ತಯಾರಿದ್ದ ಮದುಮಗಳು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.