ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಆರೋಪಿ ದರ್ಶನ್ಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ (High Court) ನಡೆದ ವಿಚಾರಣೆ ಮಹತ್ವದ ತಿರುವು ಪಡೆದುಕೊಂಡಿದೆ. ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ (Actor Darshan) ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.
ಸಾಕ್ಷ್ಯ ವಿಚಾರಣೆ ನಡೆಯುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆದಿದ್ದು, ಸಾಕ್ಷಿಗಳ ಪಾಟಿ ಸವಾಲಿನ ಸಂದರ್ಭದಲ್ಲಿ ದರ್ಶನ್ ಖುದ್ದು ಹಾಜರಾಗಲು ಅವಕಾಶ ನೀಡುವ ಬಗ್ಗೆ ನ್ಯಾಯಾಲಯ ಮಹತ್ವದ ಸೂಚನೆ ನೀಡಿದೆ. ಇದನ್ನೂ ಓದಿ: ಮಮತಾ ಟಿಎಂಸಿ ಬಣದ ಅಭ್ಯರ್ಥಿ ಯೂಟರ್ನ್ – ನಂದಿಗ್ರಾಮ ಉಪಚುನಾವಣೆ ನಾಮಪತ್ರ ವಾಪಸ್
ದರ್ಶನ್ ಅರ್ಜಿಗೆ ಸಮ್ಮತಿಸಿದ ಹೈಕೋರ್ಟ್, ಷರತ್ತುಬದ್ಧ ಅನುಮತಿ ಕೊಟ್ಟಿದೆ. ಪ್ರಾಸಿಕ್ಯೂಷನ್ 1 ವರ್ಷದಲ್ಲಿ 60 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕು, 7 ಮುಖ್ಯ ಸಾಕ್ಷಿಗಳ ವಿಚಾರಣೆಯೂ ಇದರಲ್ಲಿ ಸೇರಿರಬೇಕು, ಮುಖ್ಯ ವಿಚಾರಣೆ ಬಳಿಕ ಕ್ರಾಸ್ ಎಕ್ಸಾಮಿನೇಷನ್ಗೆ ಪ್ರತ್ಯೇಕ ದಿನಾಂಕ ಹಾಗೂ ನಿಗದಿತ ದಿನಾಂಕಗಳಂದು ಕ್ರಾಸ್ ಎಕ್ಸಾಮಿನೇಷನ್ ನಡೆಸಬೇಕು. ಈ ವೇಳೆ ಸರ್ಕಾರ ಸೂಕ್ತ ಭದ್ರತೆ ಒದಗಿಸಿ ದರ್ಶನ್ ಕರೆತರಬೇಕು ಎಂದು ಪೀಠ ಆದೇಶಿಸಿದೆ.
ಸಾಕ್ಷಿಗಳ ಪಾಟಿ ಸವಾಲು ಮತ್ತು ನಟ ದರ್ಶನ್ ಹಾಜರಾತಿ ವೇಳೆ ನ್ಯಾಯಾಲಯದ ಆವರಣದಲ್ಲಿ ನೂಕುನುಗ್ಗಲು ಅಥವಾ ಭದ್ರತಾ ಲೋಪ ಉಂಟಾಗುವ ಸಾಧ್ಯತೆಗಳಿದ್ದರೆ, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯಬಿದ್ದರೆ ಇನ್-ಕ್ಯಾಮೆರಾ ಪ್ರೊಸೀಡಿಂಗ್ಸ್ ನಡೆಸಬಹುದು ಎಂದು ಸೆಷೆನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ಮುಕ್ತ ಅವಕಾಶ ನೀಡಿದೆ.
ಇದೇ ವೇಳೆ, ಖುದ್ದು ಹಾಜರಾತಿಗೆ ಕೋರ್ಟ್ ಅವಕಾಶ ಮಾಡಿಕೊಟ್ಟಿರುವದನ್ನ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಸುಮಾರು 1,616 ಕೇಸ್ಗಳ ಟ್ರಯಲ್ ನಡೆಯುತ್ತಿದೆ. ಎನ್ಐಎ ಪ್ರಕರಣಗಳ ಕೈದಿಗಳೂ ಇದ್ದಾರೆ. ಇತರೆ ಆರೋಪಿಗಳೂ ಇದನ್ನೇ ಕೇಳಿದರೆ ಸಮಸ್ಯೆ ಆಗಲಿದೆ. ಇ-ಮುಲಾಕತ್ ಸೌಲಭ್ಯದಡಿ ಆರೋಪಿಯೊಂದಿಗೆ ಸಂಭಾಷಣೆ ನಡೆಸಬಹುದು. ಆರೋಪಿಗಳ ಖುದ್ದು ಹಾಜರಿ ಬೇಕಿಲ್ಲ. ದರ್ಶನ್ ಅಲ್ಲದೆ ಇತರ ಆರು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರ ಹಾಗೆ ಅವರು ನಾಳೆ ಅರ್ಜಿ ಸಲ್ಲಿಸಬಹುದು ವಾದಿಸಿದ್ರು
ಸದ್ಯ ಪರಪ್ಪನ ಕಾರಾಗೃಹದಲ್ಲಿರುವ ದರ್ಶನ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದರು. ಆದರೆ, ಸಾಕ್ಷಿಗಳ ಪಾಟಿ ಸವಾಲಿನ ವೇಳೆ ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಸಾಕ್ಷಿಗಳನ್ನು ಮುಖಾಮುಖಿ ವೀಕ್ಷಿಸಲು ತಮಗೆ ಖುದ್ದು ಹಾಜರಾತಿಗೆ ಅವಕಾಶ ನೀಡಬೇಕೆಂದು ದರ್ಶನ್ ಕೋರಿದ್ದರು. ಈ ಆದೇಶದಿಂದಾಗಿ ದರ್ಶನ್ ವಿಚಾರಣೆ ವೇಳೆ ಕೋರ್ಟ್ನಲ್ಲಿ ಭೌತಿಕವಾಗಿ ಹಾಜರಿರಲಿದ್ದು, ತಮ್ಮ ಪರ ವಕೀಲರಿಗೆ ಅಗತ್ಯ ಸೂಚನೆಗಳನ್ನು ನೀಡಲು ದಾರಿ ಸುಗಮವಾದಂತಾಗಿದೆ. ಇದನ್ನೂ ಓದಿ: ದಾಖಲೆ ಇಲ್ಲದ ಗ್ರಾಮಠಾಣಾ ಸ್ವತ್ತಿಗೆ ನ.1ರಿಂದ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ

