ಚೆನ್ನೈ: ರಾಜ್ಯದಲ್ಲಿ ಮಳೆಯ ಅನಿಶ್ಚಿತತೆಯ ಮಧ್ಯೆಯೇ ತಮಿಳುನಾಡಿಗೆ (Tamil Nadu) ಕರ್ನಾಟಕ(Karnataka) 28 ಟಿಎಂಸಿ ನೀರು ಹರಿದಿದೆ. ನಮಗೆ ನೀರಿಲ್ಲ…ನೀರಿಲ್ಲ ಎನ್ನುತ್ತಿದ್ದ ತಮಿಳುನಾಡು ಈಗ ಕುರುವೈ ಬೆಳೆಗೆ ನೀರು ಬಿಡುಗಡೆ ಮಾಡಿದೆ.
ಭತ್ತದ ಬೆಳೆಗೆ ನೆರವಾಗಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Joseph Vijay) ಅವರು ಮಂಗಳವಾರ ಮೆಟ್ಟೂರು ಅಣೆಕಟ್ಟಿನಿಂದ(Mettur Dam) ನೀರನ್ನು ಬಿಡುಗಡೆ ಮಾಡಿದ್ದಾರೆ.
120 ಅಡಿ ಸಾಮರ್ಥ್ಯದ ಮೆಟ್ಟೂರಿನಲ್ಲಿ ಸದ್ಯ 91 ಅಡಿ ನೀರಿದ್ದು, 45 ದಿನಗಳ ಬಳಿಕ ನೀರು ಬಿಡುಗಡೆ ಮಾಡಿದೆ. ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಜಲಾಶಯದಲ್ಲಿ ಗೇಟ್ ಓಪನ್ ಮಾಡಿ ಪೂಜೆ ಸಲ್ಲಿಸುವ ಮೂಲಕ ನೀರು ಬಿಡುಗಡೆಗೆ ಚಾಲನೆ ಕೊಟ್ಟರು.
ನೀರು ವ್ಯರ್ಥವಾಗದಂತೆ ಸಮರ್ಥವಾಗಿ ಬಳಸಿಕೊಳ್ಳಲು ಕೃಷಿ ಮತ್ತು ರೈತರ ಕಲ್ಯಾಣ, ಜಲಸಂಪನ್ಮೂಲ ಹಾಗೂ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಆಯಾ ಜಿಲ್ಲಾಡಳಿತಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ:
ಪ್ರತಿಯೊಂದು ಘನ ಅಡಿ ನೀರೂ ರೈತರಿಗೆ ತಲುಪಬೇಕು ಎಂದು ಸರ್ಕಾರ ಒತ್ತಿಹೇಳಿದ್ದು, ಅಕ್ರಮವಾಗಿ ನೀರು ಪಂಪ್ ಮಾಡುವುದು, ಅನಧಿಕೃತವಾಗಿ ನೀರು ಎತ್ತುವುದು ಹಾಗೂ ನೀರಾವರಿ ನಿಯಮಗಳ ಉಲ್ಲಂಘನೆಯ ವಿರುದ್ಧ ಕಠಿಣ ಎಚ್ಚರಿಕೆ ನೀಡಿದೆ.
ಕಾವೇರಿ ನೀರಿನಲ್ಲಿ ತಮಿಳುನಾಡಿನ ಕಾನೂನುಬದ್ಧ ಪಾಲನ್ನು ಪುನರುಚ್ಚರಿಸಿದ ಮುಖ್ಯಮಂತ್ರಿ, ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ನ 2018ರ ತೀರ್ಪಿನ ಅಡಿಯಲ್ಲಿ ರಾಜ್ಯಕ್ಕಿರುವ ಹಕ್ಕಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಪಾಲನ್ನು ಪಡೆಯಲು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಸರ್ಕಾರ ಮುಂದುವರಿಸಲಿದೆ ಎಂದರು.
