ತಮ್ಮ ಕುರಿತಾಗಿ ಸುಳ್ಳು ಸುದ್ದಿ ಹಬ್ಬಿಸಿದವರ ಚಳಿ ಬಿಡಿಸಲು ನಟ ದೊಡ್ಡಣ್ಣ (Doddanna) ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ದೊಡ್ಡಣ್ಣ ನಿಧನರಾಗಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಸುದ್ದಿ ರಾಜ್ಯ ಮಟ್ಟದಲ್ಲಿ ವೈರಲ್ ಆಗಿತ್ತು. ಅನೇಕರು ದೊಡ್ಡಣ್ಣ ಅವರಿಗೆ ಕಾಲ್ ಮಾಡಿ ವಿಚಾರಿಸಿದ್ದರು. ಇದೀಗ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ನಟ ದೂರು ನೀಡಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿದ ದಿನವೇ ವಿಡಿಯೋ ಮಾಡಿ ತಾವು ಆರೋಗ್ಯದಿಂದ ಇರುವುದಾಗಿ ದೊಡ್ಡಣ್ಣ ತಿಳಿಸಿದ್ದರು. ಜೊತೆಗೆ ಈ ರೀತಿ ಸುಳ್ಳು ಸುದ್ದಿ ಮಾಡಿದವರ ವಿರುದ್ಧ ದೂರು ನೀಡೋದಾಗಿ ತಿಳಿಸಿದ್ದರು. ಇದೀಗ ದೊಡ್ಡಣ್ಣ ದೂರು ನೀಡಿದ್ದಾರೆ. ಮುಖೇಡಿಗಳ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿ ಅಂತ ಗುಡುಗಿದ್ದಾರೆ.
ಈ ಪ್ರಕರಣವನ್ನು ಸೈಬರ್ ಠಾಣೆ ಪೊಲೀಸರು (Cyber Crime Police) ಗಂಭೀರವಾಗಿ ತಗೆದುಕೊಂಡಿದ್ದು, ಯಾರೆಲ್ಲ ಸುಳ್ಳು ಸುದ್ದಿ ಹಬ್ಬಿಸಿದ್ದರೋ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅವರನ್ನು ಬಂಧಿಸಲು ಬಲೆ ಬೀಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೂರು ನೀಡುವ ಮೂಲಕ ಅದಕ್ಕೆ ಕಡಿವಾಣ ಹಾಕಬೇಕಿದೆ.
