ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆ ಮತ್ತು ಕೊಲೆ ಪ್ರಕರಣದ ಆರೋಪಿ ಆಗಿರುವ ಚಿತ್ರದುರ್ಗದ (Chitradurga) ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಬಂಧಿತ ಆರೋಪಿ. ಸಾವನ್ನಪ್ಪಿರುವ ವ್ಯಕ್ತಿ ಮಲ್ಲಿಕಾರ್ಜುನ (40) ಅವರಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಈತ ವಂಚಿಸಿದ್ದಾನೆ. ಅದಲ್ಲದೆ, ಮಲ್ಲಿಕಾರ್ಜುನ ಅವರ ಬ್ಯಾಂಕ್ ಖಾತೆ ಮೂಲಕ ಹಣ ಡಬ್ಲಿಂಗ್ ದಂಧೆ ನಡೆಸಿದ್ದ. ಇದಾದ ಬಳಿಕ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮಲ್ಲಿಕಾರ್ಜುನ ಸಾಕ್ಷಿಯಾಗಿದ್ದರು. ಇದರಿಂದ ಸ್ವತಃ ಚಂದ್ರಶೇಖರ್ ಮಲ್ಲಿಕಾರ್ಜುನನ ಹತ್ಯೆಗೆ ಸಂಚು ರೂಪಿಸಿದ್ದ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಐವರು ದುರ್ಮರಣ
ಏನಿದು ಘಟನೆ?
ಮೇ 1ರಂದು ಚಿತ್ರದುರ್ಗದ ಜಾನಕೊಂಡ ಸಮೀಪದ ತೋಟವೊಂದರ ಮನೆಯಲ್ಲಿ ಮಲ್ಲಿಕಾರ್ಜುನ ಸಾವನ್ನಪ್ಪಿದ್ದರು. ಘಟನೆಯ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಈ ಹಿಂದೆ ಏಪ್ರಿಲ್ 14 ರಂದು ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಚಿಕಿತ್ಸೆ ಪಡೆದು ಏಪ್ರಿಲ್ 18 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಬಳಿಕ ಚಂದ್ರಶೇಖರ್ಗೆ ಸೇರಿದ್ದ ತೋಟದಲ್ಲಿ ಈತನನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ ಎನ್ನಲಾಗಿದೆ.
ಅಕ್ರಮ ದಂಧೆ ಮುಚ್ಚಿ ಹಾಕಲು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಪತ್ನಿ ಆಶಾ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪತ್ನಿ ದೂರಿನಾಧಾರದ ಮೇಲೆ ಚಂದ್ರಶೇಖರ್ ಹಾಗೂ ಸದಾಶಿವ ನಾಯಕ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೊಂದಿಗೆ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಇನ್ನೋರ್ವ ಆರೋಪಿ ಚಂದ್ರಶೇಖರ್ ಪುತ್ರ ವಿನಾಯಕ್ಗೆ ಪೊಲೀಸರು ಬಲೆ ಬೀಸಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.ಇದನ್ನೂ ಓದಿ: ಇನ್ಮುಂದೆ ನೀಟ್ ಪರೀಕ್ಷೆಗೆ ಸೇನೆ ನೆರವು?
