Vijay Hazare Trophy | ಸೆಮಿಸ್‌ನಲ್ಲಿ ಕರ್ನಾಟಕ ಸೋಲಿಸಿ ಸೇಡು ತೀರಿಸಿಕೊಂಡ ವಿದರ್ಭ – 2ನೇ ಬಾರಿಗೆ ಫೈನಲ್‌ಗೆ ಲಗ್ಗೆ

1 Min Read

ಬೆಂಗಳೂರು: ಇಲ್ಲಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿಂದು ನಡೆದ ವಿಜಯ್‌ ಹಜಾರೆ ಟ್ರೋಫಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ವಿದರ್ಭ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇದರೊಂದಿಗೆ 2ನೇ ಬಾರಿಗೆ ಫೈನಲ್‌ ತಲುಪಿದ ವಿದರ್ಭ ಕಳೆದ ವರ್ಷದ ಫೈನಲ್‌ ಸೋಲಿಗೆ ಕರ್ನಾಟಕದ ವಿರುದ್ಧವೇ ಸೇಡು ತೀರಿಸಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ 49.4 ಓವರ್‌ಗಳಲ್ಲಿ 280 ರನ್‌ಗಳಿಗೆ ಆಲೌಟ್‌ ಆಯಿತು. ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನಟ್ಟಿದ ವಿದರ್ಭ ಅಮನ್ ಮೊಖಾಡೆ ಅವರ ಶತಕ, ರವಿಕುಮಾರ್ ಸಮರ್ಥ್‌ ಅವರ ಆಕರ್ಷಕ ಅರ್ಧಶತಕದ ಬ್ಯಾಟಿಂಗ್‌ ನೆರವಿನೊಂದಿಗೆ 46.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 284 ರನ್‌ ಬಾರಿಸಿ ಗೆಲುವು ಸಾಧಿಸಿತು.

ಚೇಸಿಂಗ್‌ ಆರಂಭಿಸಿದ ವಿದರ್ಭ ಬಹುಬೇಗನೆ ಮೊದಲ ವಿಕೆಟ್‌ ಕಳೆದುಕೊಂಡರೂ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿ ತಂಡವನ್ನ ಗೆಲುವಿನತ್ತ ಕೊಂಡೊಯ್ದರು. ಅಮನ್‌ ಮೊಖಾಡೆ 138 ರನ್‌ (122 ಎಸೆತ, 2 ಸಿಕ್ಸರ್‌, 12 ಬೌಂಡರಿ) ಬಾರಿಸಿದ್ರೆ, ಧ್ರುವ್ ಶೋರೆ 47 ರನ್‌ (64 ಎಸೆತ, 5 ಬೌಂಡರಿ), ರವಿಕುಮಾರ್‌ ಸಮರ್ಥ್‌ 76 ರನ್‌ (69 ಎಸೆತ, 7 ಬೌಂಡರಿ), ರೋಹಿತ್‌ ಬಿನ್‌ಕರ್‌ 11 ರನ್‌ಗಳ ಕೊಡುಗೆ ನೀಡಿದ್ರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕರ್ನಾಟಕ ಪರ ಕರುಣ್‌ ನಾಯರ್‌ 76 ರನ್‌ (9 ಎಸೆತ, 8 ಬೌಂಡರಿ, 1 ಸಿಕ್ಸರ್)‌, ಕೃಷ್ಣನ್‌ ಶ್ರೀಜಿತ್‌ 54 ರನ್‌, ಶ್ರೇಯಸ್‌ ಗೋಪಾಲ್‌ 36 ರನ್‌, ಧ್ರುವ್‌ ಪ್ರಭಾಕರ್‌ 28 ರನ್‌, ಅಭಿನವ್‌ ಮನೋಹರ್‌ 26 ರನ್‌ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ಔಟಾದರು. ಅಗ್ರ ಬ್ಯಾಟರ್‌ಗಳ ಬ್ಯಾಟಿಂಗ್‌ ವೈಫಲ್ಯ, ಬಿಗಿ ಹಿಡಿತ ತಪ್ಪಿದ ಬೌಲರ್‌ಗಳ ಪ್ರದರ್ಶನದಿಂದಾಗಿ ಕರ್ನಾಟಕ ಸೆಮಿಸ್‌ನಲ್ಲಿ ಸೋತು ಹೊರಬರಬೇಕಾಯಿತು.

Share This Article