ನಾಳೆ ಅಂದರೆ ಆ. 16. ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣ ಜನ್ಮಾಷ್ಟಮಿ ಎಂದಾಕ್ಷಣ ನೆನಪಾಗುವುದೇ ಮೊಸರು ಕುಡಿಕೆ, ಕೃಷ್ಣ, ರುಕ್ಮಿಣಿಯ ವೇಷ ಧರಿಸಿದ ಪುಟಾಣಿಗಳು. ಅಂದು ಕೃಷ್ಣನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಡಗರ ಮನೆ ಮಾಡಿರುತ್ತದೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಏನಾದರೂ ಸಿಹಿ ತಿಂಡಿ ಮಾಡಬೇಕು ಅಂತ ಯೋಚಿಸ್ತಿದಿರಾ? ಹಾಗಿದ್ರೆ ಮನೆಯಲ್ಲೇ ಸುಲಭವಾಗಿ ಎಳ್ಳು ಉಂಡೆ ತಯಾರು ಮಾಡೋದು ಹೇಗೆ ಅಂತ ನಾವು ತಿಳಿಸಿಕೊಡ್ತೀವಿ..
ಬೇಕಾಗಿರುವ ಸಾಮಾಗ್ರಿಗಳು:
1/2 ಕಪ್ ಎಳ್ಳು
1/4 ಕಪ್ ಒಣ ತೆಂಗಿನಕಾಯಿ ತುರಿ
1/2 ಕಪ್ ಬೆಲ್ಲ
1 ಏಲಕ್ಕಿ
ಮಾಡುವ ವಿಧಾನ:
*ಒಂದು ಪ್ಯಾನ್ ಗೆ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಬೇಕು.
* ಎಳ್ಳು ಊದಿಕೊಂಡು ಸಿಡಿಯಲು ಪ್ರಾರಂಭಿಸಿದಾಗ, ಒಣ ತೆಂಗಿನ ತುರಿ ಮತ್ತು ಏಲಕ್ಕಿ ಸೇರಿಸಿ.
* ತೆಂಗಿನಕಾಯಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಬೇಕು.
* ನಂತರ ಹುರಿದ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಹೊತ್ತು ರುಬ್ಬಿಕೊಳ್ಳಬೇಕು.
* ಹೆಚ್ಚು ರುಬ್ಬಬೇಡಿ. ತರಿತರಿ ಆಗೋವರೆಗೆ ರುಬ್ಬಿದರೆ ಸಾಕು.
* ಈಗ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಮತ್ತೆ ರುಬ್ಬಿಕೊಳ್ಳಬೇಕು.
* ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಚೆನ್ನಾಗಿ ಮಿಕ್ಸ್ ಮಾಡಬೇಕು.
* ನಂತರ ಸ್ವಲ್ಪ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಮಾಡಬೇಕು.
* ಬಳಿಕ ಎಲ್ಲಾ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಬೇಕು.