2022-23ರಲ್ಲಿ ಶ್ರೀಲಂಕಾದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟಿನಿಂದ ಜನರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸಿದ್ದರು . ಉಚಿತ ಕೊಡುಗೆಗಳಿಂದ ಬೊಕ್ಕಸ ಬರಿದಾಗಿಸಿದ್ದ ಶ್ರೀಲಂಕಾ ಸರ್ಕಾರದ ವಿರುದ್ಧ ಬೀದಿಗೆ ಇಳಿದ ಜನರು ಅಂದಿನ ಸರ್ಕಾರ ಪತನ ಆಗುವಂತೆ ಮಾಡಿದ್ದರು. ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ದೇಶದ 60 ಲಕ್ಷ ಅಂದರೆ ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನ ಆಹಾರದ ಅಭದ್ರತೆಗೆ ತುತ್ತಾಗಿದ್ದರು.
ಇದೀಗ ಮತ್ತೆ ಶ್ರೀಲಂಕಾ ಅಂತಹದೇ ಒಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಉಂಟಾಗಿದೆ. ಸುತ್ತಲೂ ಸಮುದ್ರವೇ ಇದ್ದರೂ ಶ್ರೀಲಂಕಾ ಉಪ್ಪಿನ ಕೊರತೆ ಎದರಿಸುತ್ತಿದೆ. ಹಾಗಿದ್ರೆ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆಗೆ ಕಾರಣ ಏನು? ಉಪ್ಪಿನ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಅಕಾಲಿಕ ಮಳೆಯಲ್ಲಿ ಕೊಚ್ಚಿಹೋಯ್ತು ಉಪ್ಪು:
ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್ ಹಾಗೂ ಅಕ್ಟೋಬರ್- ನವೆಂಬರ್ನಲ್ಲಿ ಉಪ್ಪಿನ ಉತ್ಪಾದನೆ ಮಾಡಲಾಗುತ್ತದೆ. ಆದರೆ ಈ ಬಾರಿ ಮಾರ್ಚ್ನಿಂದಲೇ ಶ್ರೀಲಂಕಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಉಪ್ಪು ಉತ್ಪಾದನೆಗೆ ಸಂಕಷ್ಟ ತಂದೊಡ್ಡಿದೆ. ಅಕಾಲಿಕ ಮಳೆಯಿಂದಾಗಿ ಈಗಾಗಲೇ ತಯಾರಿಸಿದ್ದ 15 ಟನ್ ಉಪ್ಪು ಮಳೆಗೆ ಕೊಚ್ಚಿ ಹೋಗಿದೆ.
ಸೂರ್ಯನ ಬೆಳಕಿಲ್ಲದೆ ಕೆಲವು ತಿಂಗಳಿಂದ ಶ್ರೀಲಂಕಾದಲ್ಲಿ ಉಪ್ಪಿನ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಹಲವೆಡೆ ಕೆಲವೊಮ್ಮೆ ಮಳೆ ಕೊಂಚ ಬಿಡುವು ಕೊಟ್ಟರೂ ಕೂಡ ಉಪ್ಪು ತಯಾರಿಕೆಗೆ ಬೇಕಾದಷ್ಟು ಪ್ರಮಾಣದಲ್ಲಿ ಬಿಸಿಲು ಸಿಗದೇ ಇರುವುದರಿಂದ ಸಂಕಷ್ಟ ಹೆಚ್ಚಾಗಿದೆ. ಮಾರ್ಚ್ನಲ್ಲಿ ಅಕಾಲಿಕ ಮಳೆ ಎದುರಾದ ಪರಿಣಾಮ ಮೇನಲ್ಲಿ ಉಪ್ಪು ಉತ್ಪಾದನೆ ಮಾಡುವ ಬಗ್ಗೆ ಶ್ರೀಲಂಕಾ ಯೋಚಿಸಿತ್ತು. ಆದರೆ ಈ ನಿರೀಕ್ಷೆಯೂ ಹುಸಿಯಾಗಿದೆ. ಉಪ್ಪು ಉತ್ಪಾದನೆ ಮಾಡಲಾಗದೆ ಬೇರೆ ದೇಶಗಳಿಂದ ಉಪ್ಪು ಆಮದು ಮಾಡಿಕೊಳ್ಳುವುದು ಶ್ರೀಲಂಕಾಗೆ ಅನಿವಾರ್ಯವಾಗಿದೆ.
ದುಪ್ಪಟ್ಟು ದರ:
ಭಾರಿ ಮಳೆಯಿಂದ ಬೇಡಿಕೆಗೆ ತಕ್ಕಂತೆ ಉಪ್ಪು ಪೂರೈಕೆ ಮಾಡಲಾಗದೇ ಶ್ರೀಲಂಕಾ ಇತರೆ ರಾಷ್ಟ್ರಗಳಿಂದ ಉಪ್ಪು ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಹೆಚ್ಚಾದಂತೆ ಬೆಲೆಯು ಹೆಚ್ಚಾಗಿದೆ. ಮೊದಲು 420 ರೂ.ಗೆ ದೊರೆಯುತ್ತಿದ್ದ 50 ಕೆಜಿ ಉಪ್ಪಿನ ಚೀಲ ಈಗ 2,000 ರೂ. ಸನಿಹ ತಲುಪಿದೆ. ಪ್ರಸ್ತುತ ಲಂಕಾದಲ್ಲಿ ಒಂದು ಕೆಜಿ ಉಪ್ಪಿಗೆ 145 ರೂ. ಇದೆ. ಮೊದಲೇ ಹಣದುಬ್ಬರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ರಾಷ್ಟ್ರ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ಉಪ್ಪನ್ನು ಕಡಿಮೆ ಬೆಲೆಗೆ ನೀಡುವುದು ಅಸಾಧ್ಯವೇ ಸರಿ.
ದೇಶಿ ಉಪ್ಪು ಉತ್ಪಾದನೆ ಕುಂಠಿತ:
ಶ್ರೀಲಂಕಾದ ಹಂಬಂಟೋಟ, ಎಲಿಫೆಂಟ್ ಪಾಸ್, ಪುಟ್ಟಲಾಂ, ಕುರಂಚತೀವು ನಗರಗಳಲ್ಲಿ ಪ್ರಮುಖ ಉಪ್ಪು ತಯಾರಿಕಾ ಘಟಕಗಳಿವೆ. ಅಕಾಲಿಕ ಮಳೆಯಿಂದ ಇಷ್ಟು ನಗರಗಳು ಉಪ್ಪು ತಯಾರಿಸಲು ಸಾಧ್ಯವಾಗಿಲ್ಲ. ಸುಮಾರು 60% ಉಪ್ಪಿನ ಪೂರೈಕೆಯನ್ನು ಪುಟ್ಟಲಾಂ ಒಂದರಿಂದಲೇ ಒದಗಿಸಲಾಗುತ್ತಿತ್ತು. ಅಲ್ಲದೆ ಎಲಿಫೆಂಟ್ ಪಾಸ್ ಹಾಗೂ ಕುರಂಚತೀವು ಘಟಕಗಳಲ್ಲಿ 1990ಕ್ಕೂ ಮುನ್ನ ಸುಮಾರು 85,000 ಟನ್ ಉಪ್ಪನ್ನು ವಾರ್ಷಿಕವಾಗಿ ತಯಾರಿಸಲಾಗುತ್ತಿತ್ತು. ಬಳಿಕ ಈ ಘಟಕಗಳನ್ನು ಎಲ್ಟಿಟಿಇ ಸಂಘಟನೆ ವಶಕ್ಕೆ ಪಡೆದ ಪರಿಣಾಮ ಉಪ್ಪು ತಯಾರಿಕೆ ಸ್ಥಗಿತಗೊಂಡಿತ್ತು.
ಆ ಬಳಿಕ ಉತ್ಪಾದನೆ ಪುನಾರಂಭವಾದರೂ ಹಿಂದಿನಷ್ಟು ಪ್ರಮಾಣದಲ್ಲಿ ಉಪ್ಪು ತಯಾರಾಗುತ್ತಿರಲಿಲ್ಲ. ಸದ್ಯ ಎಲಿಫೆಂಟ್ ಪಾಸ್ನಲ್ಲಿ 20,000 ಟನ್ ಉಪ್ಪು ವಾರ್ಷಿಕವಾಗಿ ತಯಾರಿಸಲಾಗುತ್ತದೆ. ಆದರೆ ಶ್ರೀಲಂಕಾದಲ್ಲಿ ವಾರ್ಷಿಕವಾಗಿ 1,80,000 ಟನ್ ಉಪ್ಪಿನ ಬೇಡಿಕೆ ಇದೆ. ಪ್ರಸ್ತುತ ಈ ಎಲ್ಲಾ ಘಟಕಗಳು ಸೇರಿ 1,35,000 ಟನ್ ನಿಂದ 1,40,000 ಟನ್ ಉಪ್ಪು ಪೂರೈಸುತ್ತಿದೆ. ಸದ್ಯ ಮಾರ್ಚ್ನಿಂದ ಆರಂಭವಾದ ಅಕಾಲಿಕ ಮಳೆಯಿಂದಾಗಿ ಉಪ್ಪು ಉತ್ಪಾದನೆ ಕ್ಷೀಣಗೊಂಡು 23%ರಷ್ಟು ಉಪ್ಪಿನ ಉತ್ಪಾದನೆಯನ್ನು ಮಾತ್ರ ಮಾಡಲು ಸಾಧ್ಯವಾಗುತ್ತಿದೆ.
ಶ್ರೀಲಂಕಾಗೆ ಭಾರತದ ನೆರವು:
ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಭಾರತವನ್ನು ಬೆಂಬಲಿಸಿದ ನೆರೆಯ ರಾಷ್ಟ್ರ ಶ್ರೀಲಂಕಾಗೆ ಬಿಕ್ಕಟಿನ ಸಂದರ್ಭದಲ್ಲಿ ಭಾರತ ಸಹಾಯ ಹಸ್ತ ಚಾಚಿದೆ. ತೀವ್ರ ಉಪ್ಪಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ 3,050 ಮೆಟ್ರಿಕ್ ಟನ್ ಗಳಷ್ಟು ಉಪ್ಪು ಪೂರೈಸಲು ಮುಂದಾಗಿದೆ.
ಒಟ್ಟು ಸಾಗಣೆಯಲ್ಲಿ ಸರ್ಕಾರಿ ಸ್ವಾಮ್ಯದ ಉಪ್ಪು ಕಂಪನಿಗಳು 2,800 ಮೆಟ್ರಿಕ್ ಟನ್ ಉಪ್ಪನ್ನು ರವಾನಿಸಿದೆ. ಇನ್ನುಳಿದ 250 ಮೆಟ್ರಿಕ್ ಟನ್ಗಳನ್ನು ಖಾಸಗಿ ಸಂಸ್ಥೆಗಳಿಂದ ಖರೀದಿಸಲಾಗುವುದು ಎಂದು ವರದಿಗಳು ತಿಳಿಸಿವೆ.
2022ರಲ್ಲಿ ಆರ್ಥಿಕ ಬಿಕ್ಕಟ್ಟು:
2022ರಲ್ಲಿ ಶ್ರೀಲಂಕಾ ಅತಿಯಾದ ಹಣದುಬ್ಬರ, ಆಹಾರದ ಕೊರತೆ, ತೈಲದ ಕೊರತೆ, ವಿದ್ಯುತ್ ಅಲಭ್ಯತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದು ಸಾಮಾನ್ಯ ಜನತೆ ರೊಚ್ಚಿಗೇಳುವಂತೆ ಮಾಡಿತ್ತು. ಇಂತಹ ಅರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಪಕವಾದ ರಾಜಕೀಯ ನಾಯಕತ್ವ ಇನ್ನಷ್ಟು ಅರಾಜಕತೆಗೆ ದಾರಿ ಮಾಡಿಕೊಟ್ಟಿತು.
2019ರ ವರದಿಯೊಂದರ ಪ್ರಕಾರ, ಶ್ರೀಲಂಕಾದ ರಾಷ್ಟ್ರೀಯ ಆದಾಯ ರಾಷ್ಟ್ರೀಯ ಖರ್ಚಿಗಿಂತ ಹೆಚ್ಚಿತ್ತು. ಹಾಗೆಂದು ಶ್ರೀಲಂಕಾ ತನ್ನ ಆದಾಯವನ್ನು ಅಪಾರವಾಗಿ ಹೆಚ್ಚಿಸುವಂತಹ ಏನನ್ನೂ ಉತ್ಪಾದಿಸುತ್ತಿಲ್ಲ. ಉಚಿತ ಯೋಜನೆಗಳೇ ಪ್ರಮುಖವಾಗಿ ಶ್ರೀಲಂಕಾದ ಪರಿಸ್ಥಿತಿ ಹದಗೆಡಲು ಮುಖ್ಯ ಕಾರಣವಾಗಿತ್ತು.
ಕೋವಿಡ್ – 19 ನಂತರದ ಆರ್ಥಿಕ ಸಂಕಷ್ಟವಂತೂ ದ್ವೀಪರಾಷ್ಟ್ರವನ್ನು ಪ್ರಕ್ಷುಬ್ಧವಾಗಿಸಿತು. ಅದು ಪ್ರವಾಸೋದ್ಯಮದ ಮೇಲೆ ಆಧಾರಿತವಾಗಿದ್ದ ಆರ್ಥಿಕತೆಯನ್ನೇ ನಾಶ ಮಾಡಿತು ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು ಕಳುಹಿಸುತ್ತಿದ್ದ ಹಣವೂ ಕಡಿತವಾಗುವಂತೆ ಮಾಡಿತು. ಅತಿಯಾದ ಸರ್ಕಾರಿ ಸಾಲ, ಹೆಚ್ಚುತ್ತಿದ್ದ ತೈಲ ಬೆಲೆಗಳು ದ್ಚೀಪ ರಾಷ್ಟ್ರ ಶಿಥಿಲವಾಗುವಂತೆ ಮಾಡಿದರೆ ರಾಸಾಯನಿಕ ಗೊಬ್ಬರದ ಆಮದಿನ ನಿಷೇಧ ಕೃಷಿ ಕ್ಷೇತ್ರ ಸಂಕಷ್ಟಕ್ಕೊಳಗಾಗುವಂತೆ ಮಾಡಿತು. ಶ್ರೀಲಂಕಾದ ತೈಲ ಆಮದೂ ನಿಂತು, ಶಾಲೆಗಳೂ ಮುಚ್ಚಲ್ಪಟ್ಟವು. ಅನಿವಾರ್ಯ ಉಪಯೋಗಗಳಿಗೆ ಪೆಟ್ರೋಲ್, ಡೀಸೆಲ್ ರೇಷನ್ನಿನಂತೆ ಹಂಚುವ ಪರಿಸ್ಥಿತಿ ಬಂತು. 2019ರ ಚುನಾವಣೆಯಲ್ಲಿ ರಾಜಪಕ್ಸೆ ಮಾತುಕೊಟ್ಟಂತೆ ಅತಿಯಾದ ತೆರಿಗೆ ಕಡಿತವೂ ಶ್ರೀಲಂಕಾದ ಆರ್ಥಿಕತೆಯನ್ನು ಇನ್ನಷ್ಟು ಹಾಳುಗೆಡವಿತು.
ಈ ಎಲ್ಲಾ ಆರ್ಥಿಕ ಸಂಕಷ್ಟಗಳ ಮಧ್ಯವೂ, ರಾಜಪಕ್ಸ ಸರ್ಕಾರ ಸಹಾಯಕ್ಕಾಗಿ ಐಎಂಎಫ್ ಬಾಗಿಲು ಬಡಿಯತೊಡಗಿತು. ಆದರೆ ಇದರೊಂದಿಗೆ ಅತಿಯಾಗಿ ಅಪಮೌಲ್ಯಗೊಂಡ ಶ್ರೀಲಂಕಾದ ಕರೆನ್ಸಿ, ಹೆಚ್ಚುತ್ತಿದ್ದ ಹಣದುಬ್ಬರ ಸಾರ್ವಜನಿಕರ ಸಂಕಷ್ಟಗಳನ್ನು ಹೆಚ್ಚಿಸಿತು.
ಚೀನಾ ಇದೆಲ್ಲವನ್ನೂ ತನ್ನ ಕಾರ್ಯತಂತ್ರದ ಲಾಭಕ್ಕಾಗಿ ಸಿಗುವ ಅವಕಾಶ ಎಂದು ಪರಿಗಣಿಸಿ, ಶ್ರೀಲಂಕಾದ ಆರ್ಥಿಕತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೊಂಚಿಕೆ ಹಾಕಿತು. ಇದಕ್ಕಾಗಿ ಈಗಾಗಲೇ ಸಂಕಷ್ಟದಲ್ಲಿದ್ದ ಶ್ರೀಲಂಕಾಗೆ ಚೀನಾ ವಿಪರೀತ ಬಡ್ಡಿ ದರದಲ್ಲಿ ಇನ್ನಷ್ಟು ಸಾಲ ನೀಡಿತು. ಆರಂಭದಲ್ಲಿ ಚೀನಾ ಅಪಾರವಾಗಿ ಸಾಲ ನೀಡುವ ಮೂಲಕ ಶ್ರೀಲಂಕಾದ ಆಡಳಿತವನ್ನು ತನ್ನೆಡೆಗೆ ಸೆಳೆಯಿತು. ಆ ಬಳಿಕ ಶ್ರೀಲಂಕಾದ ಆರ್ಥಿಕತೆಯನ್ನೇ ಸಾಲದ ಸುಳಿಯಲ್ಲಿ ಸಿಲುಕಿಸುವ ಉಡುಗೊರೆ ನೀಡಿ, ಶ್ರೀಲಂಕಾಗೆ ಮಿತ್ರದ್ರೋಹ ಮಾಡಿತು.