ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 23 ಶಾಸಕರು ನೂತನ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಟಿವಿಕೆ ಪಕ್ಷದ 21 ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ಈ ಮೂಲಕ ವಿಜಯ್ ಸರ್ಕಾರದಲ್ಲಿ ಸಚಿವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ತಮಿಳುನಾಡು ವಿಧಾನಸಭೆಯ ಬಲದ ಆಧಾರದ ಮೇಲೆ ಸರ್ಕಾರದಲ್ಲಿ ಗರಿಷ್ಠ 35 ಸಚಿವರನ್ನು ಹೊಂದಲು ಅವಕಾಶವಿದೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಟಿವಿಕೆ ಶಾಸಕರಲ್ಲಿ ಶ್ರೀನಾಥ್, ಕಮಲಿ ಎಸ್, ಸಿ.ವಿಜಯಲಕ್ಷ್ಮಿ, ಆರ್ ವಿ.ರಂಜಿತ್ ಕುಮಾರ್, ವಿನೋತ್, ರಾಜೀವ್, ಬಿ. ರಾಜ್ಕುಮಾರ್, ವಿ.ಗಂಧಿರಾಜ್, ಮಧನ್ ರಾಜಾ ಪಿ, ಜಗದೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ.ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ಥಿಬನ್ ಎ, ರಮೇಶ್, ಪಿ.ವಿಶ್ವನಾಥನ್, ಕುಮಾರ್ ಆರ್, ತೆನ್ನರಸು ಕೆ, ವಿ.ಸಂಪತ್ ಕುಮಾರ್, ಮೊಹಮ್ಮದ್ ಫರ್ವಾಸ್ ಜೆ, ಡಿ.ಶರತ್ ಕುಮಾರ್, ಎನ್.ಮೇರಿ ವಿಲ್ಸನ್ ಹಾಗೂ ವಿಗ್ನೇಶ್ ಕೆ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜೇಶ್ ಕುಮಾರ್ ಹಾಗೂ ತಿರು ಪಿ.ವಿಶ್ವನಾಥನ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಮಾರು ಆರು ದಶಕಗಳ ಬಳಿಕ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ಸಚಿವ ಸಂಪುಟದ ಭಾಗವಾಗಿರುವುದು ವಿಶೇಷವಾಗಿದೆ. 1967ರಲ್ಲಿ ಎಂ. ಭಕ್ತವತ್ಸಲಂ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಳಿಕ ಪಕ್ಷ ರಾಜ್ಯ ಸರ್ಕಾರದಲ್ಲಿ ಸ್ಥಾನ ಪಡೆದಿರಲಿಲ್ಲ.
ಮೈತ್ರಿ ಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಮ್ಸಿಎಲ್) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಮುಂದಿನ ಹಂತದಲ್ಲಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ಮೇ 10ರಂದು ವಿಜಯ್ ಮುಖ್ಯಮಂತ್ರಿಯಾಗಿ ಹಾಗೂ 9 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸಚಿವ ಸಂಪುಟ ವಿಸ್ತರಣೆ ಬಳಿಕ ವಿಜಯ್ ಸರ್ಕಾರ ಆಡಳಿತಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆಯಿದೆ.

