– ದಾಖಲೆಗಳನ್ನು ನೀಡಲು ಲಾರಿಯನ್ನು ಯಾವಾಗ ಕಳುಹಿಸಿ ಕೊಡಲಿ: ಹೆಚ್ಡಿಕೆಗೆ ಡಿಸಿಎಂ ತಿರುಗೇಟು
ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ ಏ.17 ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲ. ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ. ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಜಾಸ್ತಿ ಮಾಡಿ ಉದ್ಘಾಟನೆ ಮಾಡಿ, ಇವರ ಯಾತ್ರೆಗೆ ‘ಗಿಫ್ಟ್’ ಕಳಿಸಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ಎಲ್ಲರೂ ಕೇಳಬೇಕು. ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.
ಬುಧವಾರದಂದು ಕಚ್ಚಾ ತೈಲದ ಬೆಲೆ ಶೇ.4.23 ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ನ ಮೂಲ ದರ ಪ್ರತಿ ಲೀಟರ್ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ 103 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ಗೆ 60 ರೂ. ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ 91 ರೂ. ಇದೆ. 43 ರೂ. ಲಾಭ ಮಾಡುತ್ತಿದ್ದಾರೆ. ಶೇ.60 ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ ಎಂದರು.
ನಮ್ಮ ಸರ್ಕಾರ ರೈತರ ಬದುಕನ್ನು ಉಳಿಸಲು ಹಾಲಿನ ದರ ಏರಿಕೆ ಮಾಡಿದ್ದೇವೆ. ಶಾಸಕ ವಿನಯ್ ಕುಲಕರ್ಣಿ ಅವರು ಪಶುಸಂಗೋಪನೆ ಮಾಡುತ್ತಿದ್ದಾರೆ. ಎಷ್ಟು ಖರ್ಚು ವೆಚ್ಚಗಳು ಹೆಚ್ಚಾಗಿವೆ ಎಂದು ಅವರನ್ನೇ ಕೇಳಬೇಕು. ಬಿಜೆಪಿಯವರು ಜಾನುವಾರುಗಳ ಬೂಸಾ, ಹಿಂಡಿ ಬೆಲೆಯನ್ನು ಏಕೆ ಕಡಿಮೆ ಮಾಡಿಸಲಿಲ್ಲ. ಹಾಲಿನ ದರ ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆಯಿದೆ. ಕರ್ನಾಟಕದಲ್ಲಿ 42 ರೂಪಾಯಿ ಇದ್ದರೆ. ಕೇರಳ 52 ರೂ., ಗುಜರಾತ್ 53 ರೂ., ದೆಹಲಿ 55 ರೂ., ಮಹಾರಾಷ್ಟ್ರ 52 ರೂ., ತೆಲಂಗಾಣ 58 ರೂ., ಅಸ್ಸಾಂ 60 ರೂ., ಹರಿಯಾಣ 56 ರೂ., ರಾಜಸ್ಥಾನ 50 ರೂ., ಮಧ್ಯಪ್ರದೇಶ 52 ರೂ., ಪಂಜಾಬ್ 56 ರೂ., ಉತ್ತರ ಪ್ರದೇಶ 56 ರೂ. ಬೆಲೆಯಿದೆ ಎಂದು ವಿವರಿಸಿದರು.
ನೀರಿನ ಬೆಲೆ ಏರಿಕೆಯನ್ನು ಅತ್ಯಂತ ಕಡಿಮೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿ ಬಡವರ ಪರವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಚಿನ್ನದ ಬೆಲೆ 28 ಸಾವಿರ ರೂ. ಇತ್ತು. ಈಗ 92 ಸಾವಿರ ರೂ. ಇದೆ. 10 ಸಾವಿರವಿದ್ದ ಮೊಬೈಲ್ ದರ 30 ಸಾವಿರಕ್ಕೆ ಏರಿಕೆಯಾಗಿದೆ. 13 ಸಾವಿರವಿದ್ದ 32 ಇಂಚಿನ ಟಿವಿ 36 ಸಾವಿರವಾಗಿದೆ. 1.5 ಟನ್ ಸಾಮರ್ಥ್ಯದ ಎಸಿ ಬೆಲೆ 25 ಸಾವಿರದಿಂದ 44 ಸಾವಿರಕ್ಕೆ ಏರಿಕೆಯಾಗಿದೆ. ಫ್ರಿಡ್ಜ್ ಬೆಲೆ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಾಗಿದೆ. ರೂಪಾಯಿ ಎದುರು 59 ಇದ್ದ ಡಾಲರ್ ಮೌಲ್ಯ ಈಗ 89 ರೂ. ಆಗಿದೆ. ಸಿಮೆಂಟ್ ಬೆಲೆ 268 ಇದ್ದಿದ್ದು, ಈಗ 410 ರೂ.ಗೆ ಹೆಚ್ಚಳವಾಗಿದೆ. ಈ ಬೆಲೆಯನ್ನೆಲ್ಲ ಯಾರೂ ನಿಯಂತ್ರಣ ಮಾಡುವವರು ಎಂದು ಪ್ರಶ್ನಿಸಿದರು.
ಕಬ್ಬಿಣದ ಬೆಲೆ 16 ಸಾವಿರ, ಕಾರಿನ ಬೆಲೆಗಳಲ್ಲಿ ಊಹೆಗೂ ನಿಲುಕದ ಜಿಗತವಾಗಿದೆ. 1.5 ಲಕ್ಷಕ್ಕೆ ಸಿಗುತ್ತಿದ್ದ ಮಿನಿ ಟ್ರಾಕ್ಟರ್ ಬೆಲೆ 5 ಲಕ್ಷಕ್ಕೆ ಏರಿಕೆಯಾಗಿದೆ. ಫಾರ್ಚೂನರ್ ಕಾರಿನ ಬೆಲೆ 25 ಲಕ್ಷದಿಂದ 45 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವಿವಿಧ ಅಗತ್ಯ ವಸ್ತುಗಳು ಹಾಗೂ ವಾಹನಗಳ ಬೆಲೆಯ ಪಟ್ಟಿಯನ್ನು ಡಿಸಿಎಂ ಮಾಧ್ಯಮಗಳ ಮುಂದಿಟ್ಟರು. 80 ರೂ. ಇದ್ದ ಹೆದ್ದಾರಿ ಟೋಲ್ ಬೆಲೆ 250 ರೂ.ಗೂ ಹೆಚ್ಚಾಗಿದೆ. ಇದೆಲ್ಲವೂ ಅಶೋಕ್ ಅವರಿಗೆ ಕಾಣಿಸುತ್ತಿಲ್ಲವೇ? ಹಾಲಿನ ದರ ಏರಿಕೆ ವಿರೋಧಿಸುವ ನೀವು ರೈತ ವಿರೋಧಿಗಳು. ಬ್ಯಾಂಕ್ಗಳಲ್ಲಿ ಹಣ ಕಟ್ಟಲು, ಬಿಡಿಸಲು, ಚೆಕ್ಬುಕ್ ತೆಗೆದುಕೊಳ್ಳಲು ಹೀಗೆ ಎಲ್ಲದಕ್ಕೂ ಶುಲ್ಕ ವಿಧಿಸಿ ಸುಲಿಗೆ ಮಾಡಲಾಗುತ್ತಿದೆ. ಇದು ದೊಡ್ಡ ಹಗರಣವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಹೇಳುತ್ತಿದ್ದರು ಎಂದರು.
ಬಿಜೆಪಿಯವರು ಪ್ರತಿಭಟನಾ ಬ್ಯಾನರ್ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೋ ಹಾಕಿಕೊಳ್ಳಿ, ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಿ. ನಿಮ್ಮ ಆಕ್ರೋಶ ನಿಮ್ಮ ನಾಯಕರ ಮೇಲಿರಲಿ, ಇದರಿಂದ ಜನರಿಗೆ, ಪಕ್ಷಕ್ಕೆ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಬೇಕು. ಬಿಜೆಪಿಯವರ ಹೋರಾಟ ಗ್ಯಾರಂಟಿಗಳ ವಿರುದ್ಧ ನಡೆಯುತ್ತಿದೆ. 1 ಕೋಟಿ 22 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಲಾಭ ಪಡೆಯುತ್ತಿದ್ದಾರೆ. ತೆಲಂಗಾಣದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ. ಅಲ್ಲಿ 6 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಮ್ಮಲ್ಲಿ 10 ಕೆಜಿ ನೀಡಲಾಗುತ್ತಿದೆ. ನಾವು ಇಷ್ಟರ ಮಟ್ಟಿಗೆ ಗ್ಯಾರಂಟಿಗಳನ್ನು ನೀಡಿ ಯಶಸ್ವಿಯಾಗುತ್ತೇವೆ ಎಂದು ಅವರು ಎಣಿಸಿರಲಿಲ್ಲ ಅದಕ್ಕೆ ಅವರಿಗೆ ಹೊಟ್ಟೆಯುರಿ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ಮನವ ಸಂತೈಸಿಕೊಳ್ಳಿ ಕೂಡಲಸಂಗಮದೇವ ಎಂದು ವಚನ ಉಲ್ಲೇಖಿಸಿದ ಡಿಸಿಎಂ ಆ ಪಕ್ಷದ ಎಲ್ಲರೂ ವೀರರು ಶೂರರು ಆಗಲು ಹೊರಟಿದ್ದಾರೆ. ಬಿಜೆಪಿಯವರ ಪಾತ್ರೆಗಳೆಲ್ಲ ತೂತಾಗಿ ಸೋರುತ್ತಿದೆ.
ಕೇಂದ್ರ ಬಿಜೆಪಿ ಸರ್ಕಾರದ ಜನಾಕ್ರೋಶ ಎಂದು ಬಿಹೆಪಿಯವರು ಯಾತ್ರೆ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸಬಾರದು. ಅಮೆರಿಕದ ಸುಂಕ ನೀತಿಯಿಂದ ದೇಶದ ಜನರಿಗೆ ಆಗಿರುವ ನಷ್ಟದ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ. ಷೇರುಪೇಟೆ ಮುಳುಗಿ ಹೋಗಿದೆ. ಆದರೂ ಏಕೆ ಮಾತನಾಡುತ್ತಿಲ್ಲ ಎಂದು ತಿಳಿಸಿದರು.
ನೀವು ಯಾವ ವಸ್ತುಗಳ ಬೆಲೆ ಕಡಿಮೆ ಮಾಡಲು ಹೋರಾಟ ಮಾಡುತ್ತೀರಿ ಎಂದು ಕೇಳಿದಾಗ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ ಕಾರಣಕ್ಕೆ ನಮ್ಮಲ್ಲಿಯೂ ಬೆಲೆ ಏರಿಕೆಯಾಗಿದೆ. ಅವರ ನೀತಿಯ ಕಾರಣಕ್ಕೆ ನಾವು ಬೆಲೆ ಏರಿಕೆ ಮಾಡದೇ ವಿಧಿಯಿಲ್ಲ ಎಂದು ಡಿಸಿಎಂ ಹೇಳಿದರು. ಎರಡೂ ಸರ್ಕಾರಗಳ ನಡುವೆ ನಲುಗುತ್ತಿರುವುದು ಜನಸಾಮಾನ್ಯರು ಎಂದಾಗ, ಅದಕ್ಕೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ 52 ಸಾವಿರ ಕೋಟಿ ನೀಡುತ್ತಿರುವುದು. ಜಿಎಸ್ಟಿಯನ್ನು ಈಗಾಗಲೇ ನಮ್ಮ ನಾಯಕರು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಹೆಸರಿಟ್ಟಿದ್ದಾರೆ. ಎಲ್ಲಾ ಬೆಲೆ ಏರಿಕೆಗೂ ಜಿಎಸ್ಟಿಯೇ ಮೂಲ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎನ್ನುವ ರಾಯರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅದನ್ನು ಅವರು ಹೇಳಿಲ್ಲ ಎನ್ನುವ ಮರು ಹೇಳಿಕೆ ನೀಡಿದ್ದಾರಲ್ಲ. ಇದರ ಬಗ್ಗೆ ಅವರನ್ನು ಕರೆದು ಮಾತನಾಡುತ್ತೇನೆ. ಅವರ ಬಳಿ ಚರ್ಚೆ ನಡೆಸುತ್ತೇನೆ. ಬಿಲ್ ಪಾವತಿಗೆ ಕೆಲವು ಸಚಿವರು ವಿಳಂಬ ಮಾಡುತ್ತಿದ್ದಾರೆ. ಎನ್ಓಸಿಗೆ ಕಮಿಷನ್ ಕೇಳುತ್ತಿರುವುದರ ಬಗ್ಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿರುವ ಬಗ್ಗೆ ಲೋಕಾಯುಕ್ತಕ್ಕೆ ಹಾಗೂ ಸರ್ಕಾರಕ್ಕೆ ದೂರು ನೀಡಲಿ. ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತೇವೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ನನ್ನ ಇಲಾಖೆಯನ್ನು ಪ್ರಸ್ತಾಪ ಮಾಡಿರಬಹುದು. ಎಲ್ಲಾ ಇಲಾಖೆಗಳ ಬಗ್ಗೆಯೂ ದೂರು ನೀಡಿರಬಹುದು. ಗುತ್ತಿಗೆದಾರರು ದೂರು ನೀಡಲಿ. ನಮಗೆ ಬಿಲ್ ನೀಡಿ ಎಂದು ಕೇಳುತ್ತಾರೆ. ನಾವು ಶೇ.10-20 ರಷ್ಟು ಬಿಲ್ ಬಿಡುಗಡೆ ಮಾಡಿರುತ್ತೇವೆ ಎಂದು ಹೇಳಿದರು.
ಅಹಮದಾಬಾದ್ ಎಐಸಿಸಿ ಅಧಿವೇಶನದ ಬಗ್ಗೆ ಕೇಳಿದಾಗ, ಬೆಳಗಾವಿಯ ಅಧಿವೇಶನದಲ್ಲಿ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಘೋಷಣೆ ಮಾಡಲಾಗಿತ್ತು. ಸ್ಥಳೀಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎನ್ನುವ ಚರ್ಚೆ ನಡೆಸಲಾಯಿತು. ಬಡ, ಹಿಂದುಳಿದ ವರ್ಗಗಳ ರಕ್ಷಣೆಗೆ ಹೊಸ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಲಾಯಿತು. ಪಕ್ಷಕ್ಕೆ ಹೊಸದಿಕ್ಕು ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಇತರೇ ಚರ್ಚೆಗಳ ಬಗ್ಗೆ ಕೇಳಿದಾಗ, ಯಾವುದೇ ಬದಲಾವಣೆಯಿಲ್ಲ. ಒಂದಷ್ಟು ಪದಾಧಿಕಾರಿಗಳನ್ನು ನೇಮಕ ಮಾಡುತ್ತಾರೆ. ಒಂದಷ್ಟು ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಾರೆ. ಇದು ಹೊರತಾಗಿ ಯಾರೂ ಸಹ ಯಾವುದೇ ವಿಷಯವನ್ನು ನನ್ನ ಬಳಿ ಚರ್ಚೆ ಮಾಡಿಲ್ಲ. ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನದ ಏ.17 ರಂದು ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕೆ ಬರಲಿದ್ದಾರೆ. ಬೆಂಗಳೂರು ಬಿಟ್ಟು ಬೇರೆ ಕಡೆ ಎರಡನೇ ವಿಮಾನ ನಿಲ್ದಾಣವಾಗಲಿ ಎಂದು ಒಂದಷ್ಟು ಶಾಸಕರು ಪತ್ರ ಬರೆದಿರುವ ಬಗ್ಗೆ ತಿಳಿದಿಲ್ಲ. ನನಗೆ ಇಡೀ ಕರ್ನಾಟಕವೇ ಒಂದು. ಚಾಮರಾಜನಗರ, ಬೀದರ್, ಕಲಬುರಗಿ ಎಲ್ಲವೂ ನನಗೆ ಒಂದೇ. ಒಂದಷ್ಟು ಜನ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಅವರಲ್ಲಿ ಭೂಮಿ ಬೆಲೆ ಕಡಿಮೆಯಿದೆ ಆದ ಕಾರಣಕ್ಕೆ ಹೇಳಿರಬಹುದು. ಇದರ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಹೊರತು ನಾವಲ್ಲ ಎಂದರು.
ಪ್ರತ್ಯೇಕವಾಗಿ ವಿಮಾನ ನಿಲ್ದಾಣಕ್ಕೆ ನಾನು ಯಾವುದೇ ಮನವಿ ನೀಡಿಲ್ಲ. ಇದಕ್ಕೆ ಮಂತ್ರಿಗಳು ಇದ್ದಾರೆ ಅವರು ಇದನ್ನು ನಿಭಾಯಿಸುತ್ತಿದ್ದಾರೆ. ಪರಿಷತ್ ನಾಮನಿರ್ದೇಶನದ ಬಗ್ಗೆ ಒಮ್ಮತ ಮೂಡಿಲ್ಲ ಎನ್ನುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಮಾಧ್ಯಮದವರಿಗೆ ಮಾಹಿತಿ ಇರಬೇಕು. ಸದನದಲ್ಲಿ ಪಕ್ಷದ ಪರವಾಗಿ ಹೋರಾಟ ಮಾಡುವವರಿಗೆ ಅವಕಾಶ ನೀಡುತ್ತೇವೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಎಂದಿಗೂ ಕಾರ್ಯಕರ್ತರ ಪರವಾಗಿ ನಿಲ್ಲುವವನು. ಪಕ್ಷದ ಒಳಗೆ ದುಡಿಯುವ ಕಾರ್ಯಕರ್ತರ ಪರವಾಗಿ ನಾನು ಎಂದಿಗೂ ಇರುವವನು. ಎಐಸಿಸಿ ಅಧಿವೇಶನದಲ್ಲಿ ರಾಯಚೂರಿನ ಸಾಮಾನ್ಯ ಕಾರ್ಯಕರ್ತನಿಗೆ ಮಾತನಾಡಲು ಅವಕಾಶ ಸಿಕ್ಕಿತು ನಿಮಗೆ ಸಿಕ್ಕಿಲ್ಲ ಎಂದು ಕೇಳಿದಾಗ, ಯಾರು ಹೇಳಿದವರು. ನಾವು ಆಂತರಿಕ ಸಭೆಯಲ್ಲಿ ಮಾತನಾಡಿದ್ದೇವೆ. ಅದನ್ನೆಲ್ಲಾ ನೇರಪ್ರಸಾರ ಮಾಡಲು ಆಗುತ್ತದೆಯೇ? ಮುಖ್ಯಮಂತ್ರಿಯವರು ರಾಜ್ಯದ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ನಾವೆಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರು. ವೀರಪ್ಪ ಮೊಯಿಲಿ ಅವರು, ಶ್ರೀನಿವಾಸ್ ಸೇರಿದಂತೆ ಅನೇಕರು ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ವಿರುದ್ಧ ಗಣಿ ಗುತ್ತಿಗೆ ಕಿಕ್ಬ್ಯಾಕ್ ಪಡೆದ ಆರೋಪ ರಾಜಕೀಯವಾಗಿ ಆರೋಪ ಮಾಡಲು ಪ್ರಯತ್ನ ಮಾಡುತ್ತಿರಬಹುದು. ಇದರಲ್ಲಿ ಯಾವುದೇ ಸತ್ಯವಿಲ್ಲ. ಕಾನೂನಿನ ಚೌಕಟ್ಟು ಬಿಟ್ಟು ಯಾರೂ ಈ ರೀತಿ ಮಾಡಲು ಆಗುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಎಲ್ಲವೂ ಸುಳ್ಳು ಆರೋಪ. ನಿಮ್ಮ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಟನ್ಗಟ್ಟಲೇ ದಾಖಲೆಗಳಿವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅವರಿಗೆ ಯಶಸ್ಸಾಗಲಿ ಎಂದು ಬೇಡಿಕೊಳ್ಳುತ್ತೇನೆ. ಜೊತೆಗೆ ದಾಖಲೆಗಳನ್ನು ನೀಡಲು ಲಾರಿಯನ್ನು ಯಾವಾಗ ಕಳುಹಿಸಿ ಕೊಡಲಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.