– ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಕಿರುಕುಳಕ್ಕೆ ಬೇಸತ್ತು ಬಾಲಕ ಕಣ್ಣೀರು
ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಂಪನಿಗಳ (Micro Finance Company) ಸಾಲದ ಕಿರುಕುಳ ಜಾಸ್ತಿಯಾಗಿದೆ. ನಮ್ಮ ಕಿಡ್ನಿ ಮಾರಿಯಾದರೂ ಅಪ್ಪ-ಅಮ್ಮನ ಸಾಲ ತೀರಿಸುತ್ತೇವೆ, ಅನುಮತಿ ಕೊಡಿಸಿ ಎಂದು ಸರ್ಕಾರಕ್ಕೆ ಬಾಲಕನೋರ್ವ ಮನವಿ ಮಾಡಿರುವ ಕರುಣಾಜನಕ ದೃಶ್ಯ ಮನಕಲಕುವಂತಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಚಾಮರಾಜನಗರ ಜಿಲ್ಲೆಯ ಹಲವೆಡೆ ಗ್ರಾಮ ತೊರೆದ 100 ಕ್ಕೂ ಹೆಚ್ಚು ಕುಟುಂಬಗಳು ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿವೆ. ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ಪೋಷಕರು ತಮ್ಮ ಜೊತೆ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕುಗೊಳ್ಳುತ್ತಿದೆ. ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ. ಇದನ್ನೂ ಓದಿ: ಡಿಕೆಶಿ ಎರಡೂವರೆ ವರ್ಷ ಯಾಕೆ, ಮುಂದೆ ಐದು ವರ್ಷ ಸಿಎಂ ಆಗಲಿ: ಕೆ.ಎನ್.ರಾಜಣ್ಣ
ಸಾಲದ ಜಾಲಕ್ಕೆ ಸಿಲುಕಿ ಕುಟುಂಬಗಳು ಊರನ್ನೇ ತೊರೆದು ಹೋಗಿವೆ. ಗೃಹಕೃತ್ಯದ ಖರ್ಚು ವೆಚ್ಚಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಮಾಡಿಕೊಂಡಿದ್ದರು. ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ನಮ್ಮಮ್ಮ ಚಾಪೆ ಹಾಸಿ ಸಾಲ ಕಟ್ಟು ಅಂತಾರೆ ಸಾರ್. ಕೈ ಮುಗಿದು ಕೇಳಿಕೊಳ್ತೀನಿ. ನನ್ನ ಒಂದು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ. ಸರ್ಕಾರ ಪರ್ಮಿಷನ್ ಕೊಟ್ರೆ ನನ್ನ ಕಿಡ್ನಿ ಮಾರಿ ಸಾಲ ತೀರಿಸ್ತೀನಿ ಎಂದು ಬಾಲಕನೊಬ್ಬ ಮನವಿ ಮಾಡಿಕೊಂಡಿದ್ದಾನೆ.
ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ತಾರೆ, ಕಿರುಕುಳ ಕೊಡ್ತಾರೆ. ನಾವು ಸತ್ತೋಗ್ತೀವಿ ಬದುಕಲ್ಲ. ನಿಮ್ಮ ಎಜುಕೇಷನ್ ನೀವು ನೋಡ್ಕೊಂಡು ಹೋಗಿ ಅಂತ ಅಪ್ಪ-ಅಮ್ಮ ಹೇಳ್ತಿದ್ದಾರೆ. ನಮ್ಮ ಅಪ್ಪ-ಅಮ್ಮನನ್ನು ಬಿಟ್ಟು ನಾನು, ನನ್ನ ತಂಗಿ ಬದ್ಕೋಕ್ಕೆ ಆಗುತ್ತಾ ಸರ್. ನಾವೆಲ್ಲರು ಸಾಯ್ಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ ಎಂದು ಚಾಮರಾಜನಗರ ತಾಲೂಕು ಹೆಗ್ಗವಾಡಿಪುರದ ಬಾಲಕ ಅಳಲು ತೋಡಿಕೊಂಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕಾಗಿಯೇ ಶತ್ರು ಸಂಹಾರ ಪೂಜೆ: ಕುಮಾರಸ್ವಾಮಿ