ಕೊಲಂಬೊ: ತಮಿಳುನಾಡಿನ (Tamil Nadu) ನೆಡುಂತೀವು ಬಳಿಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 22 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಅಲ್ಲದೇ 3 ಮೀನುಗಾರರ ದೋಣಿಗಳನ್ನು ಶ್ರೀಲಂಕಾದ ನೌಕಾಪಡೆ (Sri Lankan Navy) ವಶಪಡಿಸಿಕೊಂಡಿದೆ.
ಮೀನುಗಾರರನ್ನು ನಿರಂತರವಾಗಿ ಶ್ರೀಲಂಕಾ ಬಂಧಿಸುತ್ತಿರುವ ವಿಚಾರವಾಗಿ, ಜೂ.19 ರಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರಿಗೆ ಪತ್ರ ಬರೆದಿದ್ದರು. ಇಂತಹ ಘಟನೆಗಳು ಮೀನುಗಾರರ ಜೀವನೋಪಾಯಕ್ಕೆ ಅಡ್ಡಿಪಡಿಸುತ್ತವೆ. ಅಲ್ಲದೇ ಇಡೀ ಮೀನುಗಾರ ಸಮುದಾಯದಲ್ಲಿ ಭಯ ಹುಟ್ಟು ಹಾಕುತ್ತದೆ. ಬಂಧನಕ್ಕೊಳಗಾಗಿರುವ ಎಲ್ಲಾ ಮೀನುಗಾರರು ಮತ್ತು ಅವರ ದೋಣಿಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದರು. ಪತ್ರ ಬರೆದ ಬೆನ್ನಲ್ಲೇ ಮತ್ತೆ ಮೀನುಗಾರರ ಬಂಧನವಾಗಿದೆ. ಇದನ್ನೂ ಓದಿ: 24 ವರ್ಷಗಳ ನಂತರ ಉ.ಕೊರಿಯಾಗೆ ರಷ್ಯಾ ಅಧ್ಯಕ್ಷ ಭೇಟಿ – ನ್ಯಾಟೊ ಒಕ್ಕೂಟ ರಾಷ್ಟ್ರಗಳಲ್ಲಿ ನಡುಕ!
ಬಂಧಿತ ಮೀನುಗಾರರ ಬಿಡುಗಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇದು ಅವರ ದೈನಂದಿನ ಜೀವನ ಮತ್ತು ಜೀವನೋಪಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ 19 ಮೀನುಗಾರರನ್ನು ಶ್ರೀಲಂಕಾದ ಕೊಲಂಬೊದಿಂದ ಏರ್ ಇಂಡಿಯಾ ವಿಮಾನದ ಮೂಲಕ ಚೆನ್ನೈಗೆ ಕಳುಹಿಸಲಾಗಿತ್ತು. ಅವರನ್ನು ಮಾರ್ಚ್ 6 ರಂದು ಸಮುದ್ರದ ಗಡಿ ದಾಟಿದ್ದಕ್ಕಾಗಿ ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಈ ಮೀನುಗಾರರು 9 ಮಂದಿ ಮೈಲಾಡುತುರೈ, ನಾಲ್ವರು ಪುದುಕೊಟ್ಟೈ ಮತ್ತು ಆರು ಮಂದಿ ಪುದುಚೇರಿಯ ಕಾರೈಕಲ್ನಿಂದ ಸೇರಿದ್ದರು. ಇದನ್ನೂ ಓದಿ: ದರ್ಶನ್ ಪ್ರಕರಣ: ತಪ್ಪಿಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ನಿರ್ದೇಶಕ ಓಂ ಪ್ರಕಾಶ್ ರಾವ್