ಹುಬ್ಬಳ್ಳಿ: 1962 ರಲ್ಲಿ 34,000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ ಅವರು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ಖರ್ಗೆ (Mallikarjun Kharge) ಅವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಅರಿವು ಇದ್ದಂತಿಲ್ಲ. ಪ್ರಧಾನಿ ಮೋದಿ ಅವರ ಬಗ್ಗೆ ಖರ್ಗೆ ಅದ್ಯಾವ ಭಾಷೆ ಬಳಸುತ್ತಿದ್ದಾರೆ? ನಾವು ನಮ್ಮ ದೇಶದ ಗಡಿಗಳನ್ನು ಭದ್ರ ಮತ್ತು ಬಲಪಡಿಸಿದ್ದೇವೆ. ಚೀನಾ ಒಳನುಸುಳುಕೋರರನ್ನು ತಡೆದಿದ್ದೇವೆ. ಭವಿಷ್ಯದಲ್ಲಿನ ಅಕ್ರಮಣಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆದ್ದ ಬಳಿಕವೇ ಪ್ರಧಾನಿ ಅಭ್ಯರ್ಥಿ ಆಯ್ಕೆ: ರಾಹುಲ್
ಅಕ್ಸಾಯ್ ಚಿನ್ ಅನ್ನು ಚೀನಾಕ್ಕೆ ಹಸ್ತಾಂತರಿಸಿದ ಸಂದರ್ಭ ಹಾಗೂ ಕಾಂಗ್ರೆಸ್ ಇತಿಹಾಸವನ್ನು ಖರ್ಗೆ ಸ್ವಲ್ಪ ನೆನಪಿಸಿಕೊಳ್ಳಬೇಕು. ನಮ್ಮ ಸರ್ಕಾರ ಚೀನಾ-ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಅನುಮತಿಸಲಿಲ್ಲ. ಆದರೆ 1962 ರಲ್ಲಿ 34,000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಬಗ್ಗೆ ಪಿ.ಚಿದಂಬರಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ನಾವು ನಾಶಪಡಿಸುತ್ತಿಲ್ಲ. ನಮ್ಮ ಪಕ್ಷವನ್ನು ಬಲಪಡಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಅವರ ಜವಾಬ್ದಾರಿ, ನಮ್ಮದಲ್ಲ. ಅವರ ಪಕ್ಷವನ್ನು ಬಲಪಡಿಸಿಕೊಳ್ಳಲಿ. ಅದು ಬಿಟ್ಟು ಬಿಜೆಪಿಯನ್ನು ದೂಷಿಸಬಾರದು ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ