ಯಾವ ಪಾತ್ರವೇ ಸಿಕ್ಕರೂ ಅದರ ಆಳಕ್ಕಿಳಿದು, ಪಾತ್ರವೇ ತಾನಾಗಿ ಬಿಡುವ ತನ್ಮಯತೆ ಹೊಂದಿರೋ ಅಪರೂಪದ ನಟನರ ಸಾಲಿನಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ವಿಶೇಷ ಸ್ಥಾನವಿದೆ. ಸದಾ ಹೊಸತನದ ಪಾತ್ರಗಳಿಗಾಗಿ ಹಂಬಲಿಸುವ ಅವರನ್ನು ಅಪರೂಪದ ಪಾತ್ರಗಳೇ ಅರಸಿ ಬರುತ್ತಿವೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ‘ಕೆರೆಬೇಟೆ’ (Kerebete) ಚಿತ್ರದಲ್ಲಿಯೂ ಗೋಪಾಲ ದೇಶಪಾಂಡೆಗೆ (Gopal Deshpande) ಒಂದೊಳ್ಳೆ ಪಾತ್ರವೇ ಸಿಕ್ಕಿದೆ. ಮಲೆನಾಡು ವಾತಾವರಣವನ್ನು ಅತೀವವಾಗಿ ಇಷ್ಟಪಡುವ, ಆ ವಾತಾವರಣದ ಬಗೆಗೊಂದು ಮೋಹ ಬೆಳೆಸಿಕೊಂಡಿರುವ ಅವರಿಗೆ ಆ ಭಾಗದ ಕಥೆಯಲ್ಲಿ ಪಾತ್ರವಾಗುವ ಅವಕಾಶ ಸಿಕ್ಕಿರೋದರಿಂದ ಥ್ರಿಲ್ ಆಗಿದ್ದಾರೆ.
ಗೋಪಾಲ್ ದೇಶಪಾಂಡೆ ಮಲೆನಾಡು ಸೀಮೆಯ ಕಥೆ ಹೊಂದಿರೋ ಸಿನಿಮಾದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರಂತೆ. ಹಲವಾರು ವರ್ಷಗಳ ನಂತರ ಇದೀಗ ‘ಕೆರೆಬೇಟೆ’ಯ ಮೂಲಕ ಅದು ಕೈಗೂಡಿದೆ. ಆರಂಭದಲ್ಲಿ ನಿರ್ದೇಶಕರು ಈ ಕಥೆ ಹೇಳಿದಾಗಲೇ ಗೋಪಾಲ್ ಖುಷಿಗೊಂಡಿದ್ದರಂತೆ. ಸಾಮಾನ್ಯವಾಗಿ ಇಂಥಾ ಗ್ರಾಮ್ಯ ಸೊಗಡಿನ ಕಥೆಗಳು ದೃಷ್ಯರೂಪ ಧರಿಸುವ ಪ್ರಕ್ರಿಯೆ ಮಜವಾಗಿರುತ್ತದೆ. ಅದರ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಗೋಪಾಲ ದೇಶಪಾಂಡೆ, ಒಂದು ಪಾತ್ರವಾಗಿ ಮಾತ್ರವಲ್ಲದೇ, ಸಾಮಾನ್ಯ ಪ್ರೇಕ್ಷಕನಾಗಿಯೂ ಅದನ್ನು ಸಂಭ್ರಮಿಸಿದ್ದಾರಂತೆ.
ಒಟ್ಟಾರೆ ಕಥೆ, ಸಿನಿಮಾ ಮೂಡಿ ಬಂದಿರುವ ರೀತಿ, ನಿರ್ದೇಶನದ ಚಾಕಚಕ್ಯತೆ, ನಾಯಕನಾಗಿ ‘ಗೌರಿಶಂಕರ್’ (Gowri Shankar) ನಟಿಸಿರುವ ಪರಿಯೆಲ್ಲವೂ ಗೋಪಾಲರನ್ನು ಖುಷಿಗೊಳಿಸಿದೆ. ಅಂದಹಾಗೆ, ಅವರಿಲ್ಲಿ ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ, ಪ್ರತೀ ತಂದೆಯೂ ತನ್ನ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾನೆ, ಕೂದಲು ಕೊಂಕದಂತೆ ನೋಡಿಕೊಳ್ಳುತ್ತಾನೆ. ಅಂಥಾ ಮಮತೆ ಹೊಂದಿರುವ ಆ ಪಾತ್ರವಾಗಿ, ಇಡೀ ಕಥೆಯ ಕೇಂದ್ರಬಿಂದುವಾಗಿ ಒಂದೊಳ್ಳು ಅನುಭವವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಮಲೆನಾಡು ಮೋಹಿಯಾದ ಗೋಪಾಲ ದೇಶಪಾಂಡೆ ಮಲೆನಾಡ ಮಡಿಲಲ್ಲಿಯೇ ನಡೆದ ಚಿತ್ರೀಕರಣದ ಪ್ರತೀ ಕ್ಷಣವನ್ನೂ ಆನಂದಿಸಿದ್ದಾರೆ.
ಇದೆಲ್ಲದರೊಂದಿಗೆ ‘ಕೆರೆಬೇಟೆ’ ಎಲ್ಲರಿಗೂ ಹಿಡಿಸುತ್ತೆ, ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸುತ್ತದೆ ಎಂಬ ಗಾಢ ನಂಬಿಕೆಯೂ ಅವರಲ್ಲಿದೆ. ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ‘ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.