ಬೆಂಗಳೂರು: ಹಾವೇರಿಯಲ್ಲಿ (Haveri) ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra )ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಹಾವೇರಿ ಪ್ರಕರಣದಲ್ಲಿ ಬಿಜೆಪಿ (BJP) ರಾಜಕೀಯ ಮಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇಪದೇ ಈ ರೀತಿಯ ಘಟನೆಗಳು ಆಗುತ್ತಿವೆ. ಬೆಳಗಾವಿ ಹಾಗೂ ಹಾವೇರಿಯ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳು ನಾಚಿಕೆಗೇಡಿನ ಸಂಗತಿಯಾಗಿವೆ. ಈ ತಿಂಗಳ 7ರಂದು ಈ ಘಟನೆ ನಡೆದಿದೆ. ಈಗ ಒಂದು ವಾರ ಕಳೆದರೂ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ಎಫ್ಐಆರ್ ಕೂಡ ದಾಖಲಿಸಿಲ್ಲ. ಮತ್ತೊಂದು ಕಡೆ ಈ ದುರ್ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಆಗುತ್ತಿದೆ. ಇದು ಬೇಸರದ ಮತ್ತು ಖಂಡನೀಯ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದ ಸನ್ನಿಧಾನ- ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ʼಭಾಸ್ಕರʼ
ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಇದು ಗಂಭೀರವಾದ ವಿಚಾರವಾಗಿದ್ದು, ಇದನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸಿದೆ. ಪೊಲೀಸರು ರಾಜ್ಯ ಕಾಂಗ್ರೆಸ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ದುರ್ದೈವದ ಸಂಗತಿಯಾಗಿದೆ. ನಮ್ಮ ಪಕ್ಷದ ಹಿರಿಯರು ಅಲ್ಲಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ತನಿಖಾ ತಂಡ (SIT) ರಚಿಸಲು ಕೋರಿದ್ದೇವೆ. ಸರ್ಕಾರ ಇದನ್ನು ಮುಚ್ಚಿ ಹಾಕಬಾರದು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಚಿವರು ಉಡಾಫೆ ಮಾತನಾಡುತ್ತಾರೆ. ಇದು ಹೆಣ್ಣಿನ ಮಾನದ, ಗೌರವದ ಪ್ರಶ್ನೆಯಾಗಿದೆ. ಎಸ್ಐಟಿ ರಚಿಸಲು ಆಗ್ರಹಿಸದೆ, ವಿಪಕ್ಷವಾಗಿ ನಾವು ಇನ್ನೇನು ಮಾಡಲು ಸಾಧ್ಯ ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಜನತೆ ಭಾರೀ ಬೆಂಬಲ ನೀಡುತ್ತಿದ್ದಾರೆ. ಇವತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸೂಚನೆ ಮೇರೆಗೆ ಗೋಡೆ ಬರಹ ಆರಂಭಿಸಲಾಗಿದೆ. ಪ್ರತಿ ಬೂತ್ನಲ್ಲಿ 5 ಕಡೆ ಗೋಡೆ ಬರಹಕ್ಕೆ ಚಾಲನೆ ಕೊಡಲಾಗುತ್ತದೆ. 2024ಕ್ಕೆ ಮತ್ತೊಮ್ಮೆ ಮೋದಿ ಎಂಬುದು ದೇಶದ ಅಪೇಕ್ಷೆಯಾಗಿದೆ. ವಿಕಸಿತ ಭಾರತ ಸಂಕಲ್ಪದ ಮೂಲಕ ಮೋದಿಯವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡ ಬಿಜೆಪಿ ಹಾಗೂ ಮೋದಿಯವರ ಬಗ್ಗೆ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್ ರೈ