ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ಅದ್ಧೂರಿಯಾಗಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ದೇಶದ ಇತಿಹಾಸದಲ್ಲಿ ಸುವರ್ಣಕ್ಷಾರಗಳಿಂದ ಬರೆದಿಡುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಕಲ ತಯಾರಿಗಳು ಆರಂಭಗೊಂಡಿದೆ. ಶ್ರೀರಾಮ (Srirama) ಮಂದಿರ ಅಂತಿಮ ಹಂತದಲ್ಲಿ ಸಿದ್ದವಾಗುತ್ತಿದ್ದರೇ ಇತ್ತ ಅಯೋಧ್ಯೆಗೆ ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
ಹೌದು ರಾಮಲಲ್ಲಾ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲು ಲಕ್ಷಾಂತರ ಜನರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಈ ಜನರಿಗೆ ಸಾರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಯೋಧ್ಯೆಗೆ ಒಂದು ಸಾವಿರ ರೈಲುಗಳು ಸಂಪರ್ಕ ಕಲ್ಪಿಸಲಾಗುತ್ತಿದೆ. ಜನವರಿ 19 ರಿಂದಲೇ ರೈಲು ಸಂಚಾರ ಶುರುವಾಗಲಿದ್ದು ನೂರು ದಿನಗಳ ಕಾಲ ಈ ವಿಶೇಷ ವ್ಯವಸ್ಥೆ ಇರಲಿದೆ.
ರೈಲಿನ (Train) ಜೊತೆಗೆ ವಿಮಾನಯಾನಕ್ಕೂ (Flight) ಆದ್ಯತೆ ನೀಡಲಾಗುತ್ತಿದ್ದು, ಈ ತಿಂಗಳಾಂತ್ಯಕ್ಕೆ ಪರೀಕ್ಷೆ ಪೂರ್ಣಗೊಳ್ಳಲಿದೆ. ಜನವರಿ 6 ರಿಂದ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವ ನಿರೀಕ್ಷೆಗಳಿದೆ. ಇದನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ದಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು ಹೆಚ್ಚಿನ ವಿಮಾನಗಳ ಸಂರ್ಪಕಿಸುವ ಮೂಲಕ ಜನರಿಗೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಘಂಟೆ, ಪೂಜಾ ಸಾಮಾಗ್ರಿ ಸಮರ್ಪಣೆ
ಭದ್ರತೆಗೆ ಆದ್ಯತೆ: ಲಕ್ಷಾಂತರ ಜನರು ಸೇರುವ ಕಾರ್ಯಕ್ರಮಕ್ಕೆ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಕೇವಲ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಮಾತ್ತವಲ್ಲದೇ ತಂತ್ರಜ್ಞಾನ ಬಳಸಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಎಲ್ಲ ಪ್ರಮುಖ ಸ್ಥಳಗಳಲ್ಲಿ ಹೆಚ್.ಡಿ ಕ್ವಾಲಿಟಿ ಸಿಸಿಟಿವಿ ಕ್ಯಾಮೇರಾಗಳನ್ನು ಅಳವಡಿಸಲಾಗುತ್ತಿದೆ. ಇಲ್ಲದಲ್ಲದೇ ಎಐ ತಂತ್ರಜ್ಞಾನ ಹೊಂದಿರುವ ತಂತ್ರಜ್ಞಾನ ಬಳಸಲಾಗುತ್ತದೆ. ಇದಲ್ಲದೇ ಆಂಟಿ ಡ್ರೋನ್ ಸಿಸ್ಟಮ್ ಕೂಡಾ ಅಳವಡಿಸಲಾಗುತ್ತಿದೆ.
ರಾಜ್ಯದಿಂದ ಘಂಟೆ ಮತ್ತು ಪೂಜಾ ಸಾಮಗ್ರಿ ಸಮರ್ಪಣೆ; ಅಯೋಧ್ಯೆಯ ಶ್ರೀರಾಮ ಮಂದಿರಕ್ಕೂ ಕರ್ನಾಟಕಕ್ಕೂ ವಿಶೇಷವಾದ ಸಂಬಂಧಗಳಿದೆ. ಕರ್ನಾಟಕದಿಂದ ಕಳುಹಿಸಿರುವ ಕಲ್ಲಿನಿಂದ ಶ್ರೀರಾಮಲಲ್ಲಾ ಮೂರ್ತಿಗಳ ಪೈಕಿ ಒಂದನ್ನು ಕೆತ್ತಲಾಗುತ್ತಿದೆ. ಅದು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಸಾಧ್ಯತೆ ಇದೆ. ಈ ನಡುವೆ ರಾಜ್ಯದಿಂದ ಹಲವು ರೀತಿಯಲ್ಲಿ ಸಹಕಾರ ನೀಡಲಾಗುತ್ತಿದೆ. ಈಗ ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದಾರೆ. ದೇವಸ್ಥಾನಕ್ಕೆ ಘಂಟೆ ಮತ್ತು ಪೂಜಾ ಸಾಮಾಗ್ರಿಗಳನ್ನ ಸಮರ್ಪಣೆ ಮಾಡಿದ್ದಾರೆ. 2.5 ಟನ್ ತೂಕದ ಘಂಟೆಗಳನ್ನ ಸಮರ್ಪಣೆ ಮಾಡಿದ್ದು. 30 ಸಣ್ಣ ಗಂಟೆಗಳನ್ನು ಸಮರ್ಪಣೆ ಮಾಡಲಾಗಿದೆ. 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿದೆ. ಒಟ್ಟಿನಲ್ಲಿ ಐಸಿಹಾಸಿಕ ಕಾರ್ಯಕ್ರಮಕ್ಕೆ ಭರದ ಸಿದ್ದತೆ ಸಾಗಿದ್ದು ದೇಶದ ಜನರು ಜನವರಿ 22 ಅನ್ನು ಎದುರು ನೋಡುತ್ತಿದ್ದಾರೆ.