ಮಹಾಪರಿನಿರ್ವಾಣ ದಿನ ಆಚರಣೆ – ಅಂಬೇಡ್ಕರ್ ಭಾವ ಚಿತ್ರಕ್ಕೆ ತಲೆಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ

Public TV
4 Min Read
Modi 5

– ಸಂವಿಧಾನಶಿಲ್ಪಿ ನೆನೆದ ರಾಜ್ಯದ ಗಣ್ಯಮಾನ್ಯರು

ನವದೆಹಲಿ: ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ (Ambedkar) ಅವರ ಮಹಾಪರಿನಿರ್ವಾಣ ದಿನವನ್ನು ಸಂಸತ್‌ ಭವನದ ಆವರಣದಲ್ಲಿ (Parliament Premises) ಆಚರಿಸಲಾಯಿತು.

ಸಂಸತ್‌ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಇನ್ನಿತರ ಗಣ್ಯಮಾನ್ಯರು ಅಂಬೇಡ್ಕರ್‌ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವದಿಂದ ವಂದಿಸಿದರು. ಜೊತೆಗೆ ಸಂಸತ್ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂವಿಧಾನ ಶಿಲ್ಪಿಯನ್ನು ನೆನೆದರು. ಲಕ್ನೋದಲ್ಲಿ BSP ಮುಖ್ಯ ಮಾಯಾವತಿ ಅವರೂ ಸಹ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಅಂಬೇಡ್ಕರ್‌ ಪರಿನಿರ್ವಾಣ (Ambedkar Death Anniversary) ದಿನಕ್ಕೆ ಎಕ್ಸ್‌ನಲ್ಲಿ ಶುಭ ಕೋರಿರುವ ಪ್ರಧಾನಿ ಮೋದಿ, ಪೂಜ್ಯ ಬಾಬಾ ಸಾಹೇಬರು, ಭಾರತೀಯ ಸಂವಿಧಾನದ ಶಿಲ್ಪಿ ಜೊತೆಗೆ, ಶೋಷಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಮಾಜಿಕ ಸಾಮರಸ್ಯದ ಅಮರ ಹೋರಾಟಗಾರರಾಗಿದ್ದರು. ಇಂದು ಅವರ ಮಹಾಪರಿನಿರ್ವಾಣ ದಿನ, ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಅಂಬೇಡ್ಕರರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಬರೆದುಕೊಂಡಿದ್ದಾರೆ.

ಅಂಬೇಡ್ಕರ್‌ ನೆನೆದ ರಾಜ್ಯದ ಗಣ್ಯರು:
ಸಿದ್ದರಾಮಯ್ಯ: ಜಾತಿ, ಧರ್ಮ, ಲಿಂಗಾಧಾರಿತ ಶೋಷಣೆಯಿರದ ಸಮತೆಯ ಸಮಾಜ ನಿರ್ಮಾಣ ಡಾ. ಬಿಆರ್ ಅಂಬೇಡ್ಕರ್ ಅವರ ಕನಸಾಗಿತ್ತು. ಅವರು ತಮ್ಮ ಜ್ಞಾನ, ಅನುಭವ ಮತ್ತು ಆದರ್ಶಗಳನ್ನು ಸಂವಿಧಾನದ ರೂಪದಲ್ಲಿ ಧಾರೆಯೆರೆದಿದ್ದಾರೆ. ಸಂವಿಧಾನದ ಆಶಯಗಳಡಿ ಹೆಜ್ಜೆಹಾಕುವ ಮೂಲಕ ಬಾಬಾ ಸಾಹೇಬರ ಕನಸು ನನಸಾಗಿಸುವ ಪ್ರತಿಜ್ಞೆ ಮಾಡೋಣ. ನವ ಭಾರತದ ಶಿಲ್ಪಿ ಅಂಬೇಡ್ಕರರ ಪರಿನಿರ್ವಾಣ ದಿನದಂದು ಅವರನ್ನು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.

ಡಿ.ಕೆ ಶಿವಕುಮಾರ್:‌ ಅಸಮಾನತೆಯ ವಿರುದ್ಧ ಸಮರ ಸಾರಿದ ಮಹಾನ್ ಚೇತನ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣದಿನದಂದು ಶತ ಶತ ನಮನಗಳನ್ನು ಸಲ್ಲಿಸುತ್ತೇನೆ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದ ಅಂಬೇಡ್ಕರ್ ಅವರು, ಸಕಲರೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ.

ಸಿ.ಟಿ ರವಿ: ಕ್ರಾಂತಿ ಸೂರ್ಯ, ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಜಿ ಅಮರರಾದ ಪುಣ್ಯ ದಿನ. ಅಂಬೇಡ್ಕರ್’ಜಿಯವರ ಆಶಯಗಳನ್ನು ಈಡೇರಿಸುವ ನಿರಂತರ ಪ್ರಯತ್ನದೊಂದಿಗೆ ಅವರ ಬದುಕಿನ ಸಂದೇಶವನ್ನು ಅರ್ಥಮಾಡಿಕೊಂಡು ನಡೆಯುವ ಪ್ರತಿಜ್ಞೆ ಮಾಡೋಣ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಅವರ ಪಾದಸ್ಪರ್ಶಗೊಂಡ ಪಂಚತೀರ್ಥಗಳ ದರ್ಶನ ಮಾಡುವ ಸಂಕಲ್ಪ ಮಾಡೋಣ.

ಆರ್‌.ಅಶೋಕ್‌: ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಡಾ.‌ಬಿ .ಆರ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಶತ ಶತ ನಮನಗಳು‌.

ಬಿ.ವೈ ವಿಜಯೇಂದ್ರ: ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ.ಬಿ ಆರ್ ಅಂಬೇಡ್ಕರ್ ಅವರ ‘ಮಹಾ ಪರಿನಿರ್ವಾಣ ದಿನ’ದಂದು ಅವರನ್ನು ಗೌರವ ಹಾಗೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸೋಣ.

Share This Article