ಬೆಂಗಳೂರು: ಚುನಾವಣೆಗೆ (Karnataka Election) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ (Congress) ಕಸರತ್ತು ನಡೆಸುತ್ತಿರುವಾಗಲೇ ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಪಕ್ಷಾಂತರ ರಾಜಕೀಯದ ನಡುವೆ ನಮ್ಮ ನಾಯಕರಿಗೆ ಟಿಕೆಟ್ ಕೊಡಿ ಎಂದು ಕಾರ್ಯಕರ್ತರು ಬೀದಿಗಿಳಿದಿದ್ದು ಕಾಂಗ್ರೆಸ್ ಕಚೇರಿ ಮುಂದೆ ಆತ್ಮಹತ್ಯೆ ಯತ್ನದ ನಾಟಕ ನಡೆದಿದೆ.
ಬಿಜೆಪಿ (BJP) ತೊರೆದ ಎನ್ವೈ ಗೋಪಾಲಕೃಷ್ಣ (NY Gopalkrishna) ಇಂದು ಕಾಂಗ್ರೆಸ್ ಸೇರಿದ್ದಾರೆ. ಮೊಳಕಾಲ್ಮೂರು (Molakalumr) ಟಿಕೆಟ್ ಸಿ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಟಿಕೆಟ್ ಕೈತಪ್ಪುವ ಭೀತಿಯಲ್ಲಿ ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ಬೆಂಬಲಿಗರು ಕೆಪಿಸಿಸಿ ಕಚೇರಿ ಹೊರಗೆ ಹಂಗಾಮಾ ಸೃಷ್ಟಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಗೋಪಾಲಕೃಷ್ಣ ಬೆಂಬಲಿಗರು ಕೂಡ ತಮ್ಮ ನಾಯಕನ ಪರ ಘೋಷಣೆ ಕೂಗಿದ್ದಾರೆ. ಒಂದು ಹಂತದಲ್ಲಿ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಮುತ್ತಿಗೆ ಹಾಕಲು ಯೋಗೇಶ್ಬಾಬು ಬೆಂಬಲಿಗರು ಪ್ರಯತ್ನಿಸಿದರು. ಇದನ್ನೂ ಓದಿ: ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ
ಇದಕ್ಕೂ ಮುನ್ನ ತರಿಕೆರೆ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ಬೆಂಬಲಿಗರು ಅರೆ ಬೆತ್ತಲಾಗಿ ಪ್ರತಿಭಟನೆ ಮಾಡಿದರು. ಕೆಲವರಂತೂ ವಿಷ ಕುಡಿಯಲು ಯತ್ನಿಸಿದಾಗ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.
ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೈ ನಾಯಕರು, ಇದೇನು ಪ್ರತಿಭಟನೆ ಅಲ್ಲ, ಹಕ್ಕೊತ್ತಾಯ ಅಷ್ಟೇ. ಎಲ್ಲವನ್ನು ನಾವು ಸರಿ ಮಾಡುತ್ತೇವೆ ಎಂದಿದ್ದಾರೆ.