ಮುಂಬೈ: ನನ್ನ ಮಗಳನ್ನು ಕೊಂದ ಅಫ್ತಾಬ್ ಪೂನಾವಾಲಾನಿಗೆ (Aftab Poonawala) ಗಲ್ಲು ಶಿಕ್ಷೆ ನೀಡಿ. ಆತನ ಪೋಷಕರಿಗೂ ಕಠಿಣ ಶಿಕ್ಷೆ ನೀಡಿ ಎಂದು ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ (Delhi Murder) ಯುವತಿ ಶ್ರದ್ಧಾ ವಾಕರ್ (Shraddha Walkar) ತಂದೆ ವಿಕಾಸ್ ವಾಕರ್ (Vikas Walkar) ಒತ್ತಾಯಿಸಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆಯ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಸಾಕೇತ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಶ್ರದ್ಧಾ ತಂದೆ ವಿಕಾಸ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಗಳನ್ನು ಕಳೆದುಕೊಂಡ ದುಃಖದಲ್ಲಿ ವಿಕಾಸ್ ವಾಕರ್, ನನ್ನ ಮಗಳನ್ನು ಕೊಂದ ಅಫ್ತಾಬ್ಗೆ ಗಲ್ಲು ಶಿಕ್ಷೆಯಾಗಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರದ್ಧಾ ಅಫ್ತಾಬ್ ಬಗ್ಗೆ ಪೊಲೀಸರಿಗೆ ಈ ಮೊದಲೇ ದೂರು ನೀಡಿದ್ದಳು. ಪೊಲೀಸರು ನನ್ನ ಮಗಳ ದೂರನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಆಕೆ ಇಂದು ಬದುಕಿರುತ್ತಿದ್ದಳು. ಆಕೆಯ ದೂರಿನ ತನಿಖೆಯನ್ನು ವಿಳಂಬಗೊಳಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಬೇಕು ಎಂದರು.
ಈ ಎಲ್ಲಾ ಘಟನೆಗಳಿಗೂ ಮೊದಲೇ ಕೊಲೆಗಾರನ ಕುಟುಂಬ ನನ್ನನ್ನು ಅವಮಾನಿಸಿ ತಮ್ಮ ಮನೆಯಿಂದ ಹೊರಹಾಕಿತ್ತು. ಅಫ್ತಾಬ್ ತಂದೆ ಸೇರಿದಂತೆ ಆತನ ಕುಟುಂಬದ ಸದಸ್ಯರನ್ನು ಈ ಅಪರಾಧಕ್ಕೆ ಸಂಬಂಧಿಸಿದ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಮುಸ್ಲಿಂ ವಿದ್ಯಾವಂತರ್ಯಾರೂ ನಾಲ್ಕು ಮದುವೆಯಾಗಲ್ಲ – ನಿತಿನ್ ಗಡ್ಕರಿ
ಮಕ್ಕಳ ಹಾದಿ ತಪ್ಪಿಸುತ್ತಿರುವ ಡೇಟಿಂಗ್ ಅಪ್ಲಿಕೇಶನ್ಗಳ ಮೇಲೆ ಆದಷ್ಟು ನಿರ್ಬಂಧ ಹೇರಬೇಕು. 18 ವರ್ಷ ಮೇಲ್ಪಟ್ಟ ಮಕ್ಕಳನ್ನು ಪೋಷಕರು ಸ್ವಲ್ಪಮಟ್ಟಿಗೆ ನಿಯಂತ್ರಿಸಬೇಕು. ಶ್ರದ್ಧಾ ಮನೆ ಬಿಟ್ಟು ಹೋಗುವುದಕ್ಕೂ ಮೊದಲು ನಾನು ಮಗುವಲ್ಲ, ನಾನು ವಯಸ್ಕಳು ಎಂದು ಹೇಳಿದ್ದಳು. ಆಕೆ ಹೊರಟು ಹೋದ ಮೇಲೆ ನಾನು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಕಳೆದ 2 ವರ್ಷ ನನ್ನ ಕರೆಗಳಿಗೆ ಆಕೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಆಕೆಯ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಆಕೆ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದು ಭಾವನಾತ್ಮಕವಾಗಿ ವಿಕಾಸ್ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ