ಹೈದರಾಬಾದ್: 9 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಅವನ ಕೊನೆಯ ಉಸಿರು ಇರುವರೆಗೆ ಬಿಡುಗಡೆ ಮಾಡದಂತೆ ಸೂಚಿಸಿದೆ.
ಪೋಲೆಪಾಕಾ ಪ್ರವೀಣ್ ಅಲಿಯಾಸ್ ಪವನ್(25) ಶಿಕ್ಷೆಗೆ ಗುರಿಯಾದ ಅಪರಾಧಿ. ಜೂನ್ನಲ್ಲಿ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಗಲ್ ವಿಶೇಷ ಪೊಕ್ಸೊ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್ ಮೆಟ್ಟಿಲೇರಿದ್ದ. ಹೈ ಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ. ಈ ವೇಳೆ ಈತನ ಕೊನೆಯ ಉಸಿರು ಇರುವರೆಗೆ ಬಿಡುಗಡೆ ಮಾಡಕೂಡದು ಎಂದು ಕೋರ್ಟ್ ಆದೇಶಿಸಿದೆ.
ಅಪರಾಧಿ ಪೋಲೆಪಾಕಾ ಪ್ರವೀಣ್ ಅನಕ್ಷರಸ್ಥ, ಬಡವನಾಗಿದ್ದಾನೆ. ಈ ಹಿಂದೆ ಈ ರೀತಿಯ ಯಾವುದೇ ಘೋರ ಅಪರಾಧವನ್ನು ಮಾಡದ ಪರಿಣಾಮ ಕೋರ್ಟ್ ಶಿಕ್ಷೆಯನ್ನು ಜಿವಾವಧಿಗೆ ಇಳಿಸಿದೆ. ಇದನ್ನೂ ಓದಿ: ಠಾಣೆಯಲ್ಲೇ ಮಹಿಳಾ ಎಸ್ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ
ಮುಖ್ಯ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ನ್ಯಾಯಮೂರ್ತಿ ಎ.ಅಭಿಷೇಕ್ ರೆಡ್ಡಿ ಅವರನ್ನೊಳಗೊಂಡ ಹೈ ಕೋರ್ಟಿನ ವಿಭಾಗೀಯ ಪೀಠವು ಅಪರಾಧಿಯ ನಡತೆ ಸುಧಾರಣೆಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ ಪ್ರವೀಣ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂದು ಇದೇ ವೇಳೆ ತಿಳಿಸಿದೆ. ಆಗಸ್ಟ್ 8ರಂದು ವಾರಂಗಲ್ ನ್ಯಾಯಾಲಯವು ಘಟನೆ ನಡೆದು 48 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಮರಣದಂಡನೆ ವಿಧಿಸಿತ್ತು.
ಏನಿದು ಪ್ರಕರಣ?
ಜೂನ್ 18ರಂದು ಹನಮಕೊಂಡದ ಕುಮಾರ್ಪಲ್ಲಿಯಲ್ಲಿನ ಮನೆಯ ಮೇಲೆ 9 ತಿಂಗಳ ಕಂದಮ್ಮ ಪೋಷಕರೊಂದಿಗೆ ಟೆರಸ್ ಮೇಲೆ ಮಲಗಿದ್ದಾಗ ಪ್ರವೀಣ್ ಅಪಹರಿಸಿದ್ದ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಮಗುವಿನ ಕುಟುಂಬದವರು ಕೆಲವೇ ಗಂಟೆಗಳಲ್ಲಿ ಆತನನ್ನು ಹಿಡಿದ್ದರು. ಆದರೆ ಅಷ್ಟೊತ್ತಿಗಾಗಲೇ ನೀಚ ಮಗುವನ್ನು ಸಾಯಿಸಿಯೇ ಬಿಟ್ಟಿದ್ದ. ನಂತರ ಬಾಲಕಿಯ ಕುಟುಂಬಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಮೂಲಕ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು.