ಚೆನ್ನೈ: ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರೊಂದಿಗೆ ವಿವಾಹ ಮಾಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು 70 ವರ್ಷದ ವೃದ್ಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದಿದೆ.
ಡಿಸಿ ಅವರಿಗೆ ಅರ್ಜಿ ಸಲ್ಲಿಸಿದ ವೃದ್ಧನ ಹೆಸರು ಮಲೈಸ್ವಾಮಿ. ಆದರೆ ಅರ್ಜಿಯಲ್ಲಿ ಆತ ತನಗೆ ಕೇವಲ 16 ವರ್ಷ ಎಂದು ನಮೂದಿಸಿದ್ದು, ಸಿಂಧುರೊಂದಿಗೆ ವಿವಾಹಕ್ಕೆ ಬೇಕಾದ ಸಿದ್ಧತೆ ನಡೆಸಿಕೊಡಿ ಎಂದು ಕೋರಿದ್ದಾರೆ. ಅಲ್ಲದೇ ಮದುವೆ ಸಿದ್ಧತೆ ಮಾಡದಿದ್ದರೆ ಸಿಂಧುರನ್ನ ಅಪಹರಣ ಮಾಡುವುದಾಗಿಯೂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜನರ ಸಮಸ್ಯೆಗಳನ್ನು ಕೇಳಲು ಸಭೆಯನ್ನು ಏರ್ಪಡಿಸುತ್ತಾರೆ. ಈ ಸಭೆಗೆ ಆಗಮಿಸಿದ್ದ ಮಲೈಸ್ವಾಮಿ ಅವರು ಸಿಂಧು ಆಡುವ ಶೈಲಿ ತನಗೆ ಬಹಳ ಇಷ್ಟವಾಗಿದ್ದು, ಆಕೆಯನ್ನು ತನ್ನ ಮದುವೆಯಾಗುವ ಯೋಚನೆ ಇದೆ ಎಂದು ಇಬ್ಬರ ಫೋಟೋಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.
ಅರ್ಜಿಯಲ್ಲಿ ತಾನು 2004 ರಲ್ಲಿ ಜನಿಸಿರುವುದಾಗಿ ಹೇಳಿರುವ ಮಲೈಸ್ವಾಮಿ ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದಾರೆ. ಇಂತಹ ವಿಚಿತ್ರ ಅರ್ಜಿ ಪಡೆದಿರುವ ಜಿಲ್ಲಾಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ಜನರು ಕ್ಷಣ ಕಾಲ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಸಿಂಧುರೊಂದಿಗೆ ತನ್ನ ಮದುವೆ ಮಾಡಲೇ ಬೇಕು ಎಂದು ವೃದ್ಧ ಮಲೈಸ್ವಾಮಿ ಪಟ್ಟು ಹಿಡಿದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.