ಲಕ್ನೋ: ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿ ದಾಟುತ್ತಿದ್ದ 7 ಜನರಲ್ಲಿ 6 ಯುವಕರು ಸಾವನ್ನಪ್ಪಿರುವ ಘಟನೆ ಭಾನುವಾರದಂದು ಉತ್ತರಪ್ರದೇಶದ ಹಾಪುರ್ನಲ್ಲಿ ನಡೆದಿದೆ.
ಮೃತರನ್ನು ಸಲೀಮ್, ಆರಿಫ್, ಅಜಯ್, ಅಮೀರ್, ಆಕಾಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. ಯುವಕರು 14 ರಿಂದ 16 ವರ್ಷ ವಯಸ್ಸಿನವರಾಗಿದ್ದು, ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಮೃತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಹೈದರಾಬಾದ್ಗೆ ಕೆಲಸಕ್ಕೆ ಹೋಗಲು ಘಜಿಯಾಬಾದ್ನಲ್ಲಿ ರೈಲು ಏರಬೇಕಿತ್ತು. ಆದ್ರೆ ರೈಲು ಮಿಸ್ ಆದ ಕಾರಣ ಮಧ್ಯರಾತ್ರಿಯ ನಂತರ ಪಿಲಾಕುವಾಗೆ ಹಿಂದಿರುಗಿದ್ದರು.
ರೈಲು ಡಿಕ್ಕಿ ಹೊಡೆದ ಸಂದರ್ಭದಲ್ಲಿ ಯುವಕರು ಹಳಿ ದಾಟಲು ಯತ್ನಿಸಿದ್ದರು. ಆದ್ರೆ ವೇಗವಾಗಿ ಬಂದ ರೈಲು ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಅವರಲ್ಲಿ ಒಬ್ಬ ಯುವಕ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಘಟನೆ ಬಳಿಕ ಸ್ಥಳೀಯರು ಟ್ರ್ಯಾಕ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಕಡಿಮೆ ಬೆಳಕು ಇರುತ್ತದೆ ಹಾಗೂ ರೈಲು ಬರುತ್ತಿರುವ ಬಗ್ಗೆ ಯಾವುದೇ ಘೋಷಣೆ ಮಾಡಲ್ಲ ಎಂದು ಹೇಳಿದ್ದಾರೆ.