ಧಾರವಾಡ: ಹಿಂದೂತೇರನ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು
ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಬಂಧಿತರು. ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಲಾಗಿತ್ತು. ಗಲಾಟೆ ಸಂಬಂಧ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೂರು ಸ್ವೀಕರಿಸಿರುವ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ನಡೆದಿದ್ದೇನು.?
ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದರು.