ಚಿಕ್ಕಬಳ್ಳಾಪುರ: ಚಾಲಕನ ಅತಿ ವೇಗ (Over Speed) ಹಾಗೂ ಅಜಾಗರೂಕತೆಯಿಂದ ಕಾರು ಹೆದ್ದಾರಿ ಬದಿಯ ಅಂಡರ್ ಪಾಸ್ ಗುಂಡಿಗೆ ಬಿದ್ದು ನಾಲ್ವರು ಕಾಲೇಜು ವಿದ್ಯಾರ್ಥಿಗಳು (College Students) ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಶನಿವಾರ ರಾತ್ರಿ ನಡೆದಿದೆ.
ಬೆಂಗಳೂರು (Bengaluru) ಕಡೆಯಿಂದ ಚಿಕ್ಕಬಳ್ಳಾಪುರದ (Chikkaballapur) ಕಡೆಗೆ ಬರುತ್ತಿದ್ದ ವೋಕ್ಸ್ವ್ಯಾಗನ್ ಪೋಲೋ ಕಾರು ಅಫಘಾತಕ್ಕೀಡಾಗಿದ್ದು ಕಾರಿನಲ್ಲಿದ್ದ ಠಾಗೂರ್(21), ವಸಂತ್(19), ಆರ್ಯನ್(18), ಪವನ್(19) ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್
ಈ ನಾಲ್ವರು ಸ್ನೇಹಿತರಾಗಿದ್ದು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರದ ಬೆಂಗಳೂರು ಮೂಲದ ಪವನ್ ತನ್ನ ಸ್ನೇಹಿತರಾದ ಚಿಕ್ಕಬಳ್ಳಾಪುರದ ವಸಂತ್ ಹಾಗೂ ಆರ್ಯನ್ ಅವರನ್ನು ಚಿಕ್ಕಬಳ್ಳಾಪುರಕ್ಕೆ ಡ್ರಾಪ್ ಮಾಡಲು ಬರುತ್ತಿದ್ದ.
ಬೈಪಾಸ್ ರಸ್ತೆಯ ಕೆಳಗಿನ ತೋಟಗೆ ಎಡತಿರುವು ತೆಗೆದುಕೊಳ್ಳುವ ಭರದಲ್ಲಿ ಅತಿ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಆಂಜನೇಯ ಸ್ವಾಮಿ ದೇಗುಲದ ಎದುರುಗಡೆಯ ಅಂಡರ್ ಪಾಸ್ ಗುಂಡಿಯೊಳಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಜಲಸಮಾಧಿಯಾದರೆ ಠಾಗೂರ್ನನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಮೃತ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗರಕ್ಕೆ ರವಾನೆ ಮಾಡಿ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಮುಂದಿನ ಕಾನೂನು ಕೃಮ ಕೈಗೊಂಡಿದ್ದಾರೆ.