ಬೀದರ್: ಹಸೆಮಣೆ ಏರಬೇಕಿದ್ದ ನವ ಜೋಡಿ ಸೇರಿ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಮನಾಬಾದ ತಾಲೂಕಿನ ಬಸವಂತಪುರ ಬಳಿ ನಡೆದಿದೆ.
ಅಪಘಾತದಲ್ಲಿ ಮೃತ ಪಟ್ಟವರನ್ನು ಸಾವಿತ್ರಿ (45), ಅನುಸುಯಾ (50), ಪ್ರಿಯಾ (22) ಮತ್ತು ಹಣಮಂತ (23) ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆ ದೇವಲಗಾಣಗಾಪುರ ದತ್ತ ದಿಗಂಬರನ ದರ್ಶನ ಪಡೆದು ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸ್ವಿಫ್ಟ್ ಕಾರು ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತ ಪಟ್ಟ ಪ್ರಿಯಾ ಮತ್ತು ಹಣಮಂತ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು ಎಂದು ತಿಳಿದುಬಂದಿದೆ.
ಇವರು ಮೂಲತಃ ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಉದೀರ ನಿವಾಸಿಗಳು. ಈ ಘಟನೆಯಲ್ಲಿ ಸುಲೋಚನಾ ಎಂಬ ಮಹಿಳೆಗೆ ಗಂಭೀರವಾಗಿ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಪಘಾತದ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.