ಬೆಂಗಳೂರು: ಬೆಂಗಳೂರು ತುಳುವೆರೆ ಚಾವಡಿಯ (Tuluvere Chavadi) 28ನೇ ವರ್ಷದ ‘ಪರ್ಬದ ಲೇಸ್’ (Parbada Lase) ಕಾರ್ಯಕ್ರಮ ಜುಲೈ 26ರಂದು ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆಯಲಿದೆ.
ಭಾನುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಪರಮ ಪೂಜ್ಯ ಶ್ರೀ ಡಾ.ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ ಅಶೋಕ್ ರೈ, ತುಳು ಸಾಹಿತ್ಯ ಅಕಾಡೆಮಿಯ (Tulu Sahitya Academy) ಅಧ್ಯಕ್ಷರಾದ ತಾರನಾಥ್ ಗಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಶಶಿಧರ್ ಶೆಟ್ಟಿ ಬರೋಡಾ, ಕರ್ನಾಟಕ ಕುಸ್ತಿ ಅಕಾಡೆಮಿ ಅಧ್ಯಕ್ಷ ಗುಣರಂಜನ್ ಶೆಟ್ಟಿ , ಬಿಬಿಎಂಪಿಯ ಮಾಜಿ ಸದಸ್ಯರಾದ ಉಮೇಶ್ ಶೆಟ್ಟಿ ಮತ್ತು ರಾಜೇಂದ್ರ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತುಳು ಪರ್ಬ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಸಂವಾದ ನಡೆಯಲಿದೆ. ತುಳುನಾಡಿನ ಸಾಂಸ್ಕೃತಿಕ ವೈಭವ ಮೇಳೈಸಲಿದೆ. ತುಳುನಾಡಿನ ಜಾನಪದ ಪದಗಳ ‘ಸಂಪೊಲಿಗೆ’ ಪುಸ್ತಕ ಹಾಗೂ ‘ಮೋಕ್ಷ’ ತುಳು ಭಜನೆ ವಿಡಿಯೋ ಬಿಡುಗಡೆಯಾಗಲಿದೆ. ಸಂಜೆ ನಾಲ್ಕು ಗಂಟೆಯಿಂದ ಭಕ್ತಿ ಪ್ರಧಾನ ‘ದೈವರಾಜೆ ಶ್ರೀ ಬಬ್ಬುಸ್ವಾಮಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ತುಳುವೆರೆ ಚಾವಡಿ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ತುಳುನಾಡು ಸಿರಿ ಪ್ರಶಸ್ತಿಯನ್ನು ಸಮಾಜ ಸೇವಕರಾದ ಕೋಡಿಬೆಟ್ಟು ಅರುಣ್ ಶೆಟ್ಟಿ ಹಾಗೂ ಈಶ್ವರ್ ಮಲ್ಪೆ ಮತ್ತು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಜಯಲಕ್ಷ್ಮಿ ಕಟೀಲ್ ಅವರಿಗೆ ನೀಡಿ ಸನ್ಮಾನಿಸಲಾಗುವುದು.
ಹಾಗೇ ಪ್ರತಿಷ್ಠಿತ ದಿ. ಡಿ.ಕೆ.ಚೌಟ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ಸಾಧಕ ಕಡಮಜಲ್ ಶುಭಾಷ್ ರೈ ಹಾಗೂ ದಿ. ವಿಜಯ್ ಕುಮಾರ್ ಕುಲಶೇಕರ ನೆನಪಿನ ಪ್ರಶಸ್ತಿಯನ್ನು ತುಳು ಸೇವೆಗೆ ಶ್ರಮಿಸಿದ್ದ ಜಿ.ವಿ.ಎಸ್. ಉಳ್ಳಾಲ್ ಅವರಿಗೆ ನೀಡಿ ಗೌರವಿಸಲಾಗುವುದು.
ಚಿತ್ರಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಗಣೇಶ್ ಪಂಜಿಮಾರ್ ಮತ್ತು ಕುಸುಮಾ ಪಂಜಿಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಬೆಂಗಳೂರಿನ ತುಳುವೆರೆ ಚಾವಡಿಯ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಅಧ್ಯಕರಾದ ಮುಂಡಾಲುಗುತ್ತು ವಿಶು ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ರಘುವೀರ್ ನಾಯ್ಕ್ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 30ಕ್ಕೂ ಹೆಚ್ಚು ತುಳು ಭಾಷಿಗರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ.

